Sunday, March 25, 2012

ಹೆಳವನ ಹಾದಿಯೊಳು....

ಕೊನೆ
ಅನೂ, ನೀನು ನಂಬು, ಇಲ್ಲ ಬಿಡು. ನಿನ್ನ ಮುಖದಲ್ಲಿ ನಗು ಯಾವಾಗಲೂ ಲಾಸ್ಯವಾಡುವುದನ್ನು ಬಯಸಿದೆ, ಅಷ್ಟೆ. ಅದಕ್ಕಾಗಿ ಏನೇನೋ ಮಾಡಿದೆ. ಹಲವು ಹತ್ತು ರೀತಿಯಲ್ಲಿ ಸೋತೆ. ನೀನು ಸ್ವತಃ ತಾನು ಸಂತೋಷವಾಗಿರಬಾರದು ಎಂದು ನಿಶ್ಚಯಿಸಿರುವಂತಿದೆ.

ಕೆಲವರ ದೃಷ್ಟಿಯಲ್ಲಿ ನಾನು ನಿನ್ನನ್ನು ಬಯಸಿದೆ. ಇನ್ನು ಕೆಲವರಿಗೆ ನೀನೇ ನನ್ನನ್ನು ಪ್ರೀತಿಸುತ್ತಿದ್ದಿ. ಇದನ್ನು ನಿನಗೆ ಹೇಳಬಾರದಿತ್ತು? ಬೇರೆ ಯಾರ ಬಳಿ ಹೇಳಬಹುದಾಗಿತ್ತು ಅನೂ?

ನಿಜವಾಗಿ ನಡೆದದ್ದೇನು? ನನಗೆ ನೀನು ಸಂತೋಷವಾಗಿರುವುದು ಬೇಕು. ಅದಕ್ಕಾಗಿ ನಾನು ಏನು ಮಾಡಲೂ ತಯಾರು. ಯಾಕೆ ಎಂಬ ಬಗ್ಗೆ ನನ್ನಲ್ಲಿ ಉತ್ತರವಿಲ್ಲ. ನಾನು ನಿನ್ನನ್ನು ಪ್ರೀತಿಸುತ್ತಿದ್ದೇನಾ? ಈ ಪ್ರಶ್ನೆಯೇ ಒಂದು ಕ್ಲೀಷೆ. ಪ್ರೀತಿಯನ್ನು ದೃಢಪಡಿಸುವ ಅಗತ್ಯ ಅನುಮಾನದಿಂದ ಹುಟ್ಟುತ್ತದೆ. ನನ್ನಲ್ಲಿ ಅನುಮಾನಗಳಿಲ್ಲ, ಪ್ರಶ್ನೆಗಳೂ ಇಲ್ಲ. ನಿರ್ಧಾರಗಳೊಂದಿಗೆ ದೃಢವಾಗಿ ನಿಂತಿದ್ದೇನೆ ಅನೂ. ನನ್ನ ಪ್ರೀತಿ ಬಯಸುವುದು ನಿನ್ನ ಹಿತವನ್ನು. ನಿನ್ನ ಹಿತ ಯಾವುದರಲ್ಲಿದೆ ಅನೂ?

ಇಲ್ಲಿ ಭ್ರಮೆಗಳಿಲ್ಲ. ಕನಸುಗಳಿಲ್ಲ. ಕಲ್ಪನೆಗಳಿಲ್ಲ.

ನಿನ್ನ ಒಳಿತನ್ನು ಮಾತ್ರ ಹಾರೈಸುವ, ಬಯಸುವ ಒಂದು ಒಳ್ಳೆಯ ಪ್ರಜ್ಞೆ....ಇದನ್ನೇ ಪ್ರೀತಿ ಎಂದು ಅನುಭವದ ಮುಸುಕಿನೊಳಗೆ ಸೆಳೆದುಕೊಳ್ಳಬಹುದಾದರೆ.....ಇಲ್ಲ, ಇಲ್ಲಿ ಹೇಗಾದರೂ ನಿನ್ನನ್ನು ನನ್ನವಳನ್ನಾಗಿಸಿಕೊಳ್ಳಬೇಕೆಂಬ ಹುಚ್ಚಿಲ್ಲ. ಜಗತ್ತನ್ನೆಲ್ಲ ಸವರಿ ಹಾಕುವ ಕೆಚ್ಚಿಲ್ಲ. ಈ ಪ್ರೀತಿ ಉಕ್ಕಿ ಹರಿಯುವ ಪ್ರವಾಹದಂಥದಲ್ಲ. ಕಡಲಿನಂಥದು. ಮಂದಗಾಮಿನಿಯಂತೆ, ಸೆಳೆತಗಳಿಲ್ಲದ್ದು. ಸಂಘರ್ಷಗಳಿಲ್ಲದ ಹಾದಿಯಲ್ಲಿ ನೀನು ಹಾಯಾಗಿ ಬದುಕುವಂತಾದರೆ ನಾನು ಮನಶ್ಶಾಂತಿ ಹೊಂದುತ್ತೇನೆ. ಆದರೆ ನಿನ್ನ ಸಂತೋಷ ಯಾವುದು, ಎಲ್ಲಿದೆ ಎಂದು ನನಗೆ ತಿಳಿಯುತ್ತಿಲ್ಲ ಅನೂ. ನಿನ್ನ ಹೃದಯ - ಮನಸ್ಸುಗಳಾಳದ ನೋವಿನ ಗರ್ಭ ಮೌನದ ಮಡಿಲೊಳಗೆ ಆಗೊಮ್ಮೆ ಈಗೊಮ್ಮೆ ಮುಲುಕಿದಾಗ ಸ್ಪಂದಿಸಿದ ನಾನು ಗ್ರಹಿಸಿದ ಭಾವ...ಮಾತುಗಳ ಅಂಗಳ ದಾಟಿ ಕತ್ತಲು ತುಂಬಿದ ಮನೆ ಹೊಕ್ಕರೆ ಅಲ್ಲಿ ಹೆಪ್ಪುಗಟ್ಟಿರುತ್ತಿದ್ದ ಮೌನದ ಭಾವ ಕೇವಲ ಅನುಮಾನವಾಗಿತ್ತು ಅನೂ. ಹೌದೆ? ಅಲ್ಲವೆ? ಸಂಕಟ.

ನಾವಿಬ್ಬರೂ ಮದುವೆಯಾಗುವ ವಿಚಾರದಲ್ಲಿ ಯೋಚನೆ ಇದೆಯಾ ಎಂದು ಕೇಳಬೇಕಾಯ್ತಲ್ಲ! ಇದು ನನಗೆ ಹೊರಬರಲಾರದ್ದನ್ನು ಕೈ ಹಾಕಿ ಕೆದಕಿ ಕೆದಕಿ ಕಕ್ಕಿದ ಹಾಗಿತ್ತು - ಕೇಳುವಾಗ. ಆದರೂ ಬರಬೇಕಾದ್ದೇನೂ ಹೊರ ಬರದೆ ಕೇವಲ ವಾಕರಿಕೆ ಮಾತ್ರ ಬಂದ ಹಾಗೆ.....ಎಷ್ಟು ಕಷ್ಟ? ನನಗೆ ಗೊತ್ತಿತ್ತು ಅನೂ, ಆ ಪಾತ್ರಕ್ಕೆಂದೂ ನಾನು ಅರ್ಹನಾಗಲಾರೆ ಎಂದು. ಹೆಳವನ ಹಾದಿಯೊಳು ಮುತ್ತಿದ್ದರೇನು, ರತ್ನವಿದ್ದರೇನು? ಬೇಕೆನಿಸೆ ಎತ್ತಿಕೊಳ್ಳಲಾರ, ಕೈಯೇ ಇಲ್ಲ. ಬೇಡವೆಂದು ಹಾಯಲಾರ, ಕಾಲೇ ಇಲ್ಲ!

ನಿನಗೆ ಯಾರ ಕನಿಕರ, ಅನುಕಂಪ, ಸ್ನೇಹ, ಪ್ರೀತಿ, ಕೊನೆಗೆ ಏನೂ..... ಬೇಕಾಗಿಲ್ಲ ಎಂದು ಗೊತ್ತು ಅನೂ. ಆ ಹುಡುಗನೊಂದಿಗೆ ಕಳೆದ ಮಧುರ ಕ್ಷಣಗಳು ತಾನು ಮೋಸಹೋದೆನಲ್ಲಾ ಎಂದು ಚೀರುವ ಹೃದಯವನ್ನು ಹಿಂಡಿ ಹಿಪ್ಪೆ ಮಾಡುತ್ತಿವೆ ಎಂಬುದು ನನಗೂ ಅರ್ಥವಾಗುತ್ತದೆ. ವರ್ತಮಾನದ ಪ್ರತಿಯೊಂದೂ ಭೂತಕಾಲದೊಂದಿಗೆ ತಳುಕು ಹಾಕಿಕೊಂಡು ನಿನ್ನನ್ನು ಬೇಯಿಸುತ್ತಿದೆ ಎಂದೂ ಗೊತ್ತು. ಮತ್ತೊಮ್ಮೆ ದೈಹಿಕವಾಗಿ, ಮಾನಸಿಕವಾಗಿ ತೆರೆದುಕೊಳ್ಳಲಾರೆ ಎಂಬ ನಿನ್ನ ನಿಲುವು ಶತಶತಮಾನಗಳ ಹಿಂದೆ ಜಡಿದ ತುಕ್ಕು ಹಿಡಿದ ಬೀಗವಾಗಿ ಎಂದೂ ತೆರೆದುಕೊಳ್ಳಲಾರದ ಬಾಗಿಲುಗಳಾಚೆ ನೀನು....ಒಬ್ಬಳೇ.....

ಅನೂ, ಅನೂ, ನನಗಿದನ್ನೆಲ್ಲ ಸಹಿಸಲು ಕಷ್ಟವಾಗುತ್ತಿದೆ ಅನೂ. ಅಂದು ನಾನು ನಿನ್ನನ್ನು ಕೆದಕೀ ಕೆದಕೀ ಕೇಳಿ ವಿಷಯ ತಿಳಿದುಕೊಳ್ಳಲು ಪ್ರಯತ್ನಿಸಿದ್ದು ಕೇವಲ ಕತೆ ಕೇಳುವ ಕುತೂಹಲದಿಂದಲ್ಲ ಅನೂ. ನಾನೇನೂ ಮಾಡಲಾಗಲಿಲ್ಲವಲ್ಲಾ ಎಂಬ ನೋವು ನನ್ನನ್ನು ಹಿಂಡತೊಡಗಿದೆ. ನಿನ್ನ ನೋವನ್ನೆಲ್ಲ ನನಗೇ ಕೊಡುವಂತಿದ್ದರೆ...

ಕೊನೆಗಿನ್ನೇನು ಹೇಳಲಿ ಅನೂ? ನಿನ್ನಿಷ್ಟದಂತೆ ನೀನಿರು ಅನೂ. ನೀನು ಹೀಗಿರಬೇಕು, ಹಾಗಿರಬೇಕು ಎನ್ನಲು ನಾನ್ಯಾರು ಅಲ್ಲವೆ ಅನೂ?

ನಿನ್ನ
ಹೇಮಂತ.

"ಐದರ್ ಮೀನ್ ಆರ್ ಎಕ್ಷ್‌ಟ್ರೀಮ್"

ಹೀಗೆ ಉಗಿದವಳು ಅನೂ, ಪತ್ರಕ್ಕಲ್ಲ, ಅದರ ಭಾವಕ್ಕೆ.

ಕತೆ

ಹುಟ್ಟಿ ಕೈಕಾಲು ಬಡಿಯುವ ಮುನ್ನ ತಾಯಿ ತೀರಿಕೊಂಡಳಂತೆ. ಬಹುಶಃ ಆಗಲೇ ಯಾರಾದರೂ ಗೊಣಗಿರಬೇಕು, ಆಚೀಚೆ, ‘ಶನಿಪಿಂಡ’ ಎಂದು. ಚಿಕ್ಕಂದಿನಿಂದಲೂ ಎಲ್ಲರೂ ನನ್ನ ಸಂಕೋಚವನ್ನು ಒಣಹೆಮ್ಮೆ ಎಂದು, ಕೀಳಿರಿಮೆಯನ್ನು ಅಹಂಕಾರವೆಂದು, ಮೌನವನ್ನು ಕುತಂತ್ರವೆಂದು ತಿಳಿದು ದ್ವೇಷಿಸುತ್ತಿದ್ದರೆಂದು ಎನಿಸುತ್ತದೆ, ಈಗ. ಆಗ ಅದ್ಯಾವುದೂ ಅರ್ಥವಾಗುತ್ತಿರಲಿಲ್ಲ. ಹಾಗಾಗಿ ಮುಖ್ಯ ಎನಿಸಲೇ ಇಲ್ಲ. ಇದೇ ಇನ್ನಷ್ಟು ತಪ್ಪು ಹೆಜ್ಜೆಗಳಿಗೆ ಕಾರಣವಾಗುತ್ತ ಹೋಗಿರಬೇಕು.

ಅಪ್ಪ ತಾನಿಟ್ಟುಕೊಂಡವಳನ್ನೇ ಕಟ್ಟಿಕೊಂಡು ಅವಳ ಮನೆಯಲ್ಲೇ ಇರತೊಡಗಿದಾಗ ನನ್ನನ್ನು ಸಾಕಿಕೊಂಡವಳು ಚಿಕ್ಕಮ್ಮ. ಪ್ರೈಮರಿ ಸ್ಕೂಲ್‌ನ ಟೀಚರ್. ನಾನು ಬಿ.ಕಾಂ ಕೊನೆಯ ವರ್ಷದಲ್ಲಿದ್ದಾಗ ಚಿಕ್ಕಪ್ಪ ತೀರಿಕೊಂಡರು. ಚಿಕ್ಕಮ್ಮನ ನಾಲ್ಕು ಹೆಮ್ಮಕ್ಕಳ ಭರ್ಜರಿ ನೊಗಕ್ಕೆ ನಾನು ಕತ್ತು ಕೊಡಬೇಕಾಗಿ ಬಂದದ್ದು ಹೀಗೆ. ಇದೇನೂ ನನ್ನಲ್ಲಿ ಯಾವುದೆ ಬೇಸರ, ಕಿರಿಕಿರಿ ಹುಟ್ಟಿಸಿರಲಿಲ್ಲ, ಅನೂ ನನಗೆ ಮುಖ್ಯ ಎನಿಸುವವರೆಗೆ. ನನ್ನ ಎಂಬ ಬದುಕಿನ ವೈಯಕ್ತಿಕ ಎಂಬ ಪ್ರಶ್ನೆಗಳಿಗೆ ಉತ್ತರಿಸುವ ಛಾತಿ ಬೇಕೆಂದಾಗ ಅಂಥ ಸ್ವಾತಂತ್ರ್ಯವೇ ನನಗಿಲ್ಲ ಎಂಬುದು ಅರಿವಿಗಿಳಿಯುವವರೆಗೆ....

ಕಾಲೇಜು ಮುಗಿಸಿದ ಎರಡೇ ತಿಂಗಳಲ್ಲಿ ಆ ಮನೆ, ಜಾಗ ಮಾರಬೇಕಾಯಿತು.

"ಬಾವಿಯಲ್ಲಿ ನಮಗೇ ನೀರಿಲ್ಲ, ನೀವು ಬೇರೆ ಕಡೆಯಿಂದ ತಂದುಕೊಳ್ಳಿ." ಪಕ್ಕದ ಮನೆಯ ಸುಬ್ರಾಯ ಭಟ್ಟರ ತಕರಾರು. ಮನೆಗಿದ್ದ ಇಕ್ಕಟ್ಟಾದ ಒಂದು ದಾರಿಯನ್ನು ಮುಚ್ಚುವಂತೆ ತಮ್ಮ ಮನೆಯ ಅಂಗಳಕ್ಕೆ ಸಿಮೆಂಟ್ ಹಾಕಿ ಮೇಲೆ ತಗಡು ಹೊದೆಸಿ ಅಡ್ಡ ನಿಂತ ಗುರ್ರಾಜರಾಯರು! ಸ್ವತಃ ಅಣ್ಣ-ತಮ್ಮಂದಿರೇ ತಮ್ಮ ತಂಗಿಯರಾದ ನನ್ನ ಅಮ್ಮ ಮತ್ತು ಈ ಚಿಕ್ಕಮ್ಮನ ಬಗ್ಗೆ ತೀರ ಹಗುರವಾದ ಮಾತನ್ನು ಊರ ತುಂಬ ಚೆಲ್ಲುತ್ತಿರಬೇಕಾದರೆ ಜನ ತಾನೆ ಏನು ಮಾಡಿಯಾರು? ಆರು ಲಕ್ಷಕ್ಕೆ ಎಲ್ಲ ಮಾರಬೇಕಾಯಿತು. ಆಗ ಓಡೋಡಿ ಬಂದರು ಚಿಕ್ಕಮ್ಮನ ಒಬ್ಬ ಅಣ್ಣ ಮತ್ತು ಇನ್ನೊಬ್ಬ ತಮ್ಮ. "ಯಾರಪ್ಪನ ಜಾಗ ಅಂತ ಮಾರಿದ್ದೋ ಬೇವಾರ್ಸಿ ಮಗನೆ" ಎಂದು ಸುರುವಾದ ಆಸ್ಫೋಟ "ನಮ್ಮ ನಮ್ಮ ಪಾಲು ಕೊಟ್ಟು ನೀವೆಲ್ಲಿ ಬೇಕಾದ್ರೂ ಹಾಳಾಗಿ ಹೋಗಿ" ಎಂಬ ಮಾತಿನತ್ತ ತಲುಪುವುದಕ್ಕಷ್ಟೇ ಆಗಿತ್ತು. ಆದರೆ ಒಳ್ಳೆಯ ಬೆಲೆ ಬಾಳುವ ಆಸ್ತಿಯನ್ನು ಹೇಳದೆ ಕೇಳದೆ ಮೂರು ಕಾಸಿಗೆ ಹರಾಜಾಕಿದ ಎಂಬ ಹೆಸರು ಉಳಿಯಿತು.

ಒಂದು ಬಾಡಿಗೆ ಮನೆ ಸಿಗಲಿಲ್ಲ ಊರಲ್ಲಿ. ಊರಿಂದ ಐದಾರು ಕಿಲೊಮೀಟರ್ ದೂರದ ಗುಡ್ಡೆಯ ಅಂಚಿನಲ್ಲಿದ್ದ ಸಿಮೆಂಟ್ ಶೀಟ್‌ಗಳನ್ನು ಹೊದೆಸಿದ್ದ ಒಂದು ಶೆಡ್ ಕೊನೆಗೂ ಸಿಕ್ಕಿದ್ದು. ಖಾಲೀ ಹಾಲ್‌ನಲ್ಲಿ ಒಂದೇ ಒಂದು ಅಡ್ಡಗೋಡೆಯಿರಲಿಲ್ಲ. ಬಾತ್‌ರೂಂ, ಟಾಯ್ಲೆಟ್ ಏನೂ ಇರಲಿಲ್ಲ. ಪುಣ್ಯಕ್ಕೆ ನೀರು, ಕರೆಂಟ್ ಇದ್ದವು. ಸುತ್ತಿನ ಹತ್ತು ಸೆಂಟ್ಸ್ ಜಾಗ ಕ್ರಯಕ್ಕೆ ಸಿಕ್ಕಿತು. ಪವಾಡ ಎನಿಸುವಂತೆ ಆಗ ಕೈಯಲ್ಲುಳಿದಿದ್ದ ಹಣದಲ್ಲೇ ಜಾನಕಿಯ ಮದುವೆಯೂ ಆಗಿ ಹೋಯಿತು. ಕ್ರಮೇಣ ಬಾವಿ ತೋಡಿಸಿದೆ, ಸಣ್ಣ ತೋಟ ಬೆಳೆಸಿದೆ, ತರಕಾರಿ, ಬಾಳೆ, ಹೂ ಗಿಡಗಳು. ಬೆಳ್ದಿಂಗಳ ರಾತ್ರಿ ಬಾವಿಕಟ್ಟೆಯ ಬಳಿಯ ನೀರಿನ ತೊಟ್ಟಿದಂಡೆಯ ಮೇಲೆ ಒರಗಿ ಕೂತು ಒಂಟಿತನದ ಗಾಳಿ ಸೇವಿಸುತ್ತ ಅದರ ಹಿತಕ್ಕೆ ಅರಳುತ್ತ ಗಟ್ಟಿಯಾಗುತ್ತ ಹೋದೆ.

ಜಾನಕಿಯೀಗ ಒಂದು ಹೆಣ್ಣುಮಗುವಿನ ತಾಯಿ. ತಕ್ಕಮಟ್ಟಿಗೆ ಚೆನ್ನಾಗಿಯೇ ಇದ್ದಾಳೆ. ಎರಡನೆಯವಳು ನೇತ್ರ. ಇನ್ನೆರಡೇ ವರ್ಷಗಳಲ್ಲಿ ಡಿಗ್ರಿ ಮುಗಿಸುತ್ತಾಳೆ. ಪಿ.ಯು.ಸಿ.ಯಲ್ಲಿರುವ ಚೈತ್ರ ಥೇಟ್ ಅನುರಾಧಾ ತರ rank student ಎಂದು ಹೆಸರು ಮಾಡಿದ್ದಾಳೆ. ಕೊನೆಯವಳು ಅನನ್ಯ ಎಸ್ಸೆಸ್ಸೆಲ್ಸಿಯಲ್ಲಿದ್ದರೂ ಚೈತ್ರಳಿಗಿಂತ ದೊಡ್ಡವಳಂತೆ ಕಾಣುತ್ತಾಳೆ. ಚಿಕ್ಕಮ್ಮನ ಸರ್ವೀಸು ಇನ್ನೆರಡು ವರ್ಷಕ್ಕೆ ಮುಗಿಯುವುದರಲ್ಲಿತ್ತು. ಚಿಕ್ಕಮ್ಮನ ಅಣ್ಣನ ಅಂದರೆ ನನ್ನ ಮಾವನ ಮಗಳು ಅನೂ, ಅನುರಾಧಾ. ತಂಗಿಯನ್ನು ಬದುಕಿದ್ದೀಯಾ ಸತ್ತಿದ್ದೀಯಾ ಎಂದು ಕೇಳುವ ಸೌಜನ್ಯವನ್ನು ಎಂದೂ ತೋರಿಸದಿದ್ದರೂ ಇಬ್ಬರು ಮಾವಂದಿರು ನನ್ನನ್ನು ಕುಟುಂಬದ ಆಸ್ತಿ ನುಂಗಿ ಹಾಕಿದವ ಎಂದು ಲೇಬಲ್ ಹಚ್ಚಿ ದ್ವೇಷಿಸುತ್ತಲೇ ಬಂದಿದ್ದರು. ಕಿರಿಯ ಮಾವ ಕಳೆದ ವರ್ಷ ಬ್ರೈನ್‌ಟ್ಯೂಮರ್‌ನಿಂದ ತೀರಿಕೊಂಡಿದ್ದ. ಮೇಲಿಂದ ಮೇಲೆ ವಾಂತಿಯಾಗುತ್ತಿದ್ದರೂ ಸರಿಯಾದ ಚಿಕಿತ್ಸೆ ಕೊಡಿಸದೆ ನಿಂಬೆ ಪಾನಕ ಮಾಡಿಕೊಡುತ್ತಾ ಸಮಯ ಮೀರಿದ ಮೇಲೆ ಆಸ್ಪತ್ರೆಗೆ ಸಾಗಿಸಿದ್ದರು. ಆಪರೇಶನ್ ಥಿಯೇಟರ್ ಹೊಗುವ ಮುನ್ನವೇ ಹೆಣವಾಗಿ ಬಿಟ್ಟಿದ್ದ. ಆ ದಿನವೂ ಚಿತೆಯ ಬಳಿ ನಿಂತವ ನಾನೇ...ಪೂರ್ತಿ ಸುಟ್ಟು ಮುಗಿಯುವವರೆಗೆ.

ಊರಲ್ಲಿ ಯಾರ ಹೆಣ ಎತ್ತುವುದಿದ್ದರೂ ಜನ ನನ್ನನ್ನು ಕರೆಯುತ್ತಿದ್ದರು. "ಹೇಮಾ, ಸೊಲ್ಪ ಬಾ ಮಾರಾಯ..." ನಾನೂ ಆಫೀಸಿಗೆ ರಜೆ ಹಾಕಿಯಾದರೂ, ಜಾತಿ ಪಾತಿ ನೋಡದೆ ಹೋಗುತ್ತಿದ್ದೆ. ಚಿಕ್ಕಮ್ಮ ಗೊಣಗುವುದಿತ್ತು, "ಒಳ್ಳೆಯದಕ್ಕೆ ನೆನೆಯದ ಈ ಜನ ಹೆಣ ಸುಡಲು ಕರೆದಾಗ ಇವನ್ಯಾಕೆ ಹೋಗಬೇಕು?" ಎಂದು ಸಿಟ್ಟಾಗುತ್ತಿದ್ದುದೂ ಇತ್ತು.

ದೊಡ್ಡ ಮಾವ ಈಗ ಎರಡನೆಯ ಬಾರಿಗೆ ಎಂ.ಎಲ್.ಎ. ಆಗಿರುವಾತ. ಇಂಥವನ ಮಗಳನ್ನು ಪ್ರೀತಿಸುವುದೆಂದರೆ ಏನು ಎಂಬುದಂತೂ ನನ್ನ ಪ್ರಜ್ಞೆಗಿಳಿದಿತ್ತು. ಆದರೂ.....ಅವಳನ್ನು ನನ್ನ ಹೃದಯದಲ್ಲಿಟ್ಟುಕೊಂಡು ಪೂಜಿಸಿದ್ದೆನೆ ಹೊರತು ಎಂದೂ ಆ ಪ್ರೀತಿಯ ಪ್ರದರ್ಶನಕ್ಕೆ ಹೋಗಲಿಲ್ಲ. ಎನ್ನ ಹೃದಯದ ಹಣತೆಯಲ್ಲಿ ನೀನೊಂದು ಆರದಾ ದೀಪ| ನನ್ನ ಬಾಳ ಜ್ಯೋತಿ ಆರಿದರೂ ನಿನ್ನ ನೆನಪು ಮಾಸರು, ಪ್ರೇಮ ಆರದು| ಎಂದು ಕವನ ಬರೆದು ನನ್ನ ಪ್ರೀತಿಯನ್ನು ಅಮರವಾಗಿಸಿಕೊಂಡು ಸಮಾಧಾನ ಪಟ್ಟುಕೊಂಡಿದ್ದೆ.

ಎಲ್ಲರ ನಿರೀಕ್ಷೆ, ಕಲ್ಪನೆಗಳಿಗೆ ಆಘಾತ ನೀಡುವಂತೆ ಅನೂ ಸುದ್ದಿ ಮಾಡಿದ್ದಳು. ಯಾರಿಗೂ ಒಂದಿನಿತು ಸುಳಿವು ನೀಡದೆ ಯಾರೋ ರಫಿ ಎಂಬವನೊಡನೆ ಓಡಿ ಹೋಗಿದ್ದಳು. ಎಂ.ಎಲ್.ಎ. ಮಗಳ ಸುದ್ದಿ ಗುಸುಗುಸು ಎಂದು ಹಬ್ಬಿ ನನ್ನ ಕಿವಿಗೂ ಬಿದ್ದಾಗ ನನ್ನ ಕಲ್ಪನೆಯ ಮಧುಮಧುರ ಪಲುಕುಗಳೆಲ್ಲ ಕೀರಲು ರಾಗ ತೆಗೆದು ನನ್ನನ್ನು ಗೇಲಿ ಮಾಡಿ ಕೇಕೆ ಹಾಕಿ ನಗತೊಡಗಿದವು. ಮಾವ ಹಾರಾಡಿದ್ದನಂತೆ. " ಆಸ್ತಿ ನುಂಗಿ ನೀರು ಕುಡಿದಿದ್ದು ಸಾಲದಂತ ಆ ಹೇಮಂತ ನನ್ನ ಹುಡುಗಿಯ ತಲೆ ಕೆಡಿಸಿರಬೇಕು, ಜಾತಿ ಧರ್ಮ ಎಲ್ಲ ಸುಳ್ಳು ಅಂತ ಉಪದೇಶ ಮಾಡಿ... ಇದೇ ಬೋಳಿಮಗನ ಧೈರ್ಯ ಇಬ್ಬರಿಗೂ. ಇವನ ಕೈಕಾಲು ಮುರೀಬೇಕು ಮೊದಲು, ಮೂರು ಕಾಸಿನ ಬೇವಾರ್ಸಿ..." ಸುದ್ದಿ ತಂದ ಗಣಪುಗೆ ಹೇಳಿದ್ದೆ, "ನಿಲ್ಲಿಸು ಮಾರಾಯ, ಹೆಚ್ಚೆಂದರೆ ಮಾವನ ಮಾತು ಕೇಳಿ ನಗಬೇಕು ಅನಿಸುತ್ತೆ ಅಷ್ಟೆ. ಸತ್ಯ ಏನಂತ ತಿಳಿಯದವರ, ತಿಳಿಯುವ ಮನಸ್ಸೂ ಇಲ್ಲದವರ ಪೆದ್ದು ಮಾತು ಅವೆಲ್ಲ. ಕಾಲ ಕಳೆಯುತ್ತ ಮಾವನಿಗೇ ಎಲ್ಲ ಗೊತ್ತಾಗುತ್ತೆ ಬಿಡು..."

ಎಂದಿನಂತೆ ರಾತ್ರಿ ಬಾವಿಕಟ್ಟೆಯ ಬಳಿ ಕುಳಿತು ಆ ನೀರವತೆಯಲ್ಲಿ ಚುಕ್ಕಿಗಳು ತುಂಬಿ ನಿಗಿನಿಗಿ ಮಿನುಗುತ್ತಿದ್ದರೂ ನಿಗೂಢವಾಗುಳಿದ ಆಕಾಶದಡಿ ಒಬ್ಬನೇ, ಏನೊಂದೂ ಯೋಚನೆಗಳಿರದ ಖಾಲಿ ಮನಸ್ಸಿನ ತುಂಬ ತುಂಬಿಕೊಂಡ ಮೌನ ವೈರಾಗ್ಯವಾಗಿ ಆಲಾಪಿಸುತ್ತಿರುವಾಗ ಹೃದಯ ಕಲ್ಲಾಗಿ ಬದಲುತ್ತಿತ್ತು. ಜಗತ್ತನ್ನು ಮುಖಬೆಲೆಗೆ ನಂಬಬಾರದು, ಭಾವನೆಗಳ ದಾಸನಾಗಬಾರದು, ಸುಂದರ, ಸೌಮ್ಯ, ಚೆನ್ನ ಎನಿಸಿದವುಗಳನ್ನು ಒಪ್ಪಿಕೊಂಡ ಕ್ಷಣಕ್ಕೆ ಅಪ್ಪಿಕೊಳ್ಳಬಾರದು......ಇಂಥ ಏಟುಗಳಿಂದಲ್ಲವೆ ನಾನು ಬೆಳೆದಿದ್ದು, ಉಳಿದಿದ್ದು? ಆದರೆ ಹಾಗೆ ಇನ್ನೂ ಉಳಿದಿರುವುದಕ್ಕೆ ಏನಾದರೂ ಅರ್ಥವಿದೆಯೆ? ಬದುಕಬೇಕೆಂದು ಬದುಕುವುದೆ, ಸಾಯುವವರೆಗೂ....

ನೇತ್ರ, ಚೈತ್ರ, ಅನನ್ಯರ ಕಣ್ಣುಗಳಲ್ಲಿ ಮುಗ್ಧತೆಯ ಲೋಕ ಜಾರಿ ಕನಸುಗಳ ಲೋಕ ಅರಳುತ್ತಿದ್ದ ದಿನಗಳವು. ನಿರ್ಧರಿಸಿದ್ದೆ....ಈ ಬದುಕನ್ನು ನನಗಾಗಿ ಬದುಕುವ ಸ್ವಾತಂತ್ರ್ಯವಂತೂ ಇಲ್ಲ. ಇವರ ಕನಸುಗಳನ್ನು ನನಸಾಗಿಸಲು ಒತ್ತಾಸೆಯಾಗಿ ನಿಂತರೆ.....ಅದರಲ್ಲೆ ಎಂಥ ತೃಪ್ತಿ, ಸಾರ್ಥಕತೆ ಇದೆಯಲ್ಲವೆ?

ಬದುಕಿನ ಕೆಲವು ಕಾಕತಾಳೀಯ ವಿದ್ಯಮಾನಗಳು ಹೇಗೆ ಜನರ ಸುಳ್ಳು ಸುಳ್ಳು ಕಲ್ಪನೆಗಳೇ ನಿಜವೆನ್ನಿಸಿ ಬಿಡುತ್ತವೋ! ರಫಿ ಮತ್ತು ಅನೂ ಇಬ್ಬರಿಗೂ ಓಡಿ ಹೋಗಲು, ಎಲ್ಲೋ ಉಳಿದುಕೊಂಡು, ಮದುವೆಯಾಗಿ ಸಂಸಾರ ಹೂಡಲು ಎಲ್ಲ ವ್ಯವಸ್ಥೆ ಮಾಡಿ ಧೈರ್ಯ ತುಂಬಿದವ ನಾನೇ ಎಂಬ ಗುಲ್ಲು ಊರಲ್ಲಿದ್ದರೂ ಕ್ರಮೇಣ ಅದೆಲ್ಲ ಸುಳ್ಳು ಎಂಬುದು ಎಲ್ಲರಿಗೂ ಅರ್ಥವಾಗಿತ್ತು. ಆದರೆ ವರ್ಷ ಬದಲುವ ಮುನ್ನವೇ ಎಲ್ಲ ತಲೆಕೆಳಗಾಗುವಂಥ ಘಟನೆಯೊಂದು ನಡೆಯಿತು. ಅನೂ ನನ್ನ ಆಫೀಸಿನಲ್ಲಿ ಪ್ರತ್ಯಕ್ಷಳಾಗಿದ್ದಳು. ಅವಳು ಅನೂ ಎಂದು ಗುರುತು ಹತ್ತುವುದೇ ಕಷ್ಟವಾಗುವಂತೆ ಸೊರಗಿ ಕಡ್ಡಿಯಂತಾಗಿದ್ದ, ಕೆದರಿದ ತಲೆಯ, ಸೀರೆ ಉಟ್ಟು ವಿಚಿತ್ರ ಗಾಂಭೀರ್ಯ ಪಡೆದಿದ್ದ ಅವಳ ಮುಖದಲ್ಲಿ ನೋವು ಮಡುಗಟ್ಟಿ ನಿಂತಿತ್ತು. ಹೊರ ಬಂದಾಗ ಅವಳ ಲಗ್ಗೇಜ್ ನೋಡಿ ಇನ್ನೂ ಆಶ್ಚರ್ಯವಾಯಿತು. "ಊರಿಗೆ ಬರ್ತಾ ಇದ್ದೀಯಾ ಅನೂ" ಎಂದಾಗ ದುಃಖ ತಡೆಯಲಾರದೆ ಅತ್ತೇ ಬಿಟ್ಟಳು. "ರಫೀ ಹೋಗಿಬಿಟ್ಟ ಹೇಮಾ" ಎಂದದ್ದಷ್ಟೇ. ಆ ದಿನಗಳ ಬಗ್ಗೆ ನಾನು ಬೇರೇನೂ ಕೇಳಲಿಲ್ಲ, ಅವಳೇನೂ ಹೇಳಲಿಲ್ಲ.

ಅವಳನ್ನು ಊರಿಗೆ ಮರಳಿ ಕರೆತಂದವ ನಾನು ಎಂಬುದೇ ಇನ್ನಿಲ್ಲದ ಊಹಾಪೋಹಗಳಿಗೆ ಕಾರಣವಾಯಿತು. ಇತ್ತ ಅವಳನ್ನೊಪ್ಪಿಸಿ, ಅವಳಪ್ಪ ಅಮ್ಮನನ್ನೊಪ್ಪಿಸಿ ಪುನಃ ಅವಳನ್ನು ಅವಳ ಮನೆಗೇ ಸೇರಿಸಬೇಕಾದರೆ ಕೇಳಬಾರದ್ದನ್ನೆಲ್ಲ ಕೇಳಬೇಕಾಯಿತು.

"ಅವಳೇನಾದರೂ ಬಸಿರಾಗಿದ್ದರೆ ಅವಳನ್ನ ನೀನು ಆಗುತ್ತಿಯೇನೋ ಭಿಕನಾಸಿ" ಎಂದಿದ್ದ ನನಗಿಂತ ಹತ್ತು ವರ್ಷಕ್ಕೆ ಕಿರಿಯವನಾದ ಅನುರಾಧಾಳ ತಮ್ಮ ಜಗದೀಶ. "ದಮ್ಮಯ್ಯ ಅಂತ ಆದೇನು" ಎಂದಿತ್ತು ಹೃದಯ. ಆದರೆ ಮೂಕನಾಗಿ ಎಲ್ಲ ಕೇಳಿಸಿಕೊಂಡೆ. ಅನೂ ಸಹ.

"ಊರಲ್ಲಿದ್ದವರ ಉಸಾಬರಿಯೆಲ್ಲ ನಿನಗ್ಯಾಕೆ ಮಾರಾಯ" ಎಂದಿದ್ದರು ಚಿಕ್ಕಮ್ಮ. "ನಿನ್ನದೇ ನಿನಗೆ ಹಾಸಿ ಹೊದೆಯುವಷ್ಟಿರುವಾಗ" ಎಂದೂ ಸೇರಿಸಿದಾಗ ಮಾತ್ರ ಮೈಯುರಿಯಿತು. ಅನೂನ ನೇರ ನನ್ನ ಮನೆಗೇ ಕರೆತರಲಿಲ್ಲ ಯಾಕೆ? ಈ ಅನೂನ ಗುಬ್ಬಚ್ಚಿಯಂತೆ ನನ್ನ ಹೃದಯದ ಗೂಡಲ್ಲಿಟ್ಟು ಕಾಯುತ್ತಿರಲಿಲ್ಲವೆ ನಾನು?

ಮತ್ತೆ ಮೌನದಡಿ ಕೂತಾಗ ಕಡುನೀಲಿ ಬಾನಿಂದ ನನ್ನ ಕಲ್ಪನೆಯ ಮಿನುಗು ತಾರೆಗಳು ಪಕಪಕನೆ ಉದುರಿ ನಕ್ಕಿದ್ದವು. ಈಜು ಬಾರದವ ಮುಳುಗಿದವರನ್ನೆಂತು ಕಾಯ್ವನೊ ಗೆಳೆಯ...?

ಕಾಲೇಜಿನಲ್ಲಿದ್ದಾಗ ಈ ಅನೂ ಬಗ್ಗೆ ಬರೆದಿದ್ದ ಕವನದ ಸಾಲುಗಳು ನೆನಪಾಗಿದ್ದವು. ನನ್ನಿಂದೇ ನಿನ ಬಾಳಹಾದಿಯೊಳಿರುವ ಹೂವುಗಳೆಲ್ಲ ಬಾಡಿ ಹೋಗುವುದು ಬೇಡ| ನೇರ ಬಾಳಲಿ ನೇರ ನಡೆ, ಸುಂದರ ಬಾಳು ನಿನಗಿದೆ| ನಾನಲ್ಲ ನಿನಗೆ ತಕ್ಕವ, ದೇವರಂಥವ ಸಿಗಲಿ ನಿನಗೆ| ನಿನ್ನ ಒಳಿತನೆ ಹಾರೈಸುತಿರುವೆ, ನಿನ್ನ ನೆನಪಲೆ ನನ್ನೀ ಬಾಳಕಳೆವೆ|

ಅನುರಾಧಾ ಬಳಿ ಕೇಳಿದ್ದೆ, "ಏನಾಯಿತು ಅನೂ, ಯಾಕೆ ಹೀಗೆಲ್ಲ ಆಯ್ತು? ಬುದ್ಧಿವಂತೆ ಎನಿಸಿಕೊಂಡ ನೀನೇ ಹೀಗೆ ತಪ್ಪು ಹೆಜ್ಜೆ ಇಡಬಹುದಾ?"

ಅನೂ ಕಣ್ಣಾಲಿಗಳಲ್ಲಿ ನೀರು ತುಂಬಿಕೊಂಡೇ ಉತ್ತರಿಸಿದ್ದಳು. "ಯಾವುದು ತಪ್ಪಾಗಿತ್ತು ಹೇಮಾ? ರಫಿಯನ್ನು ನನ್ನ ಹಾಗೇ ಸಂವೇದನೆಗಳಿರುವ ಮನುಷ್ಯ ಎಂದು ಪ್ರೀತಿಸಿದ್ದೆ? ಹಿರಿಯರು ಈ ಮದುವೆಗೆ ಎಂದೂ ಒಪ್ಪಲಾರರು ಎಂದು ತಿಳಿದು ನಾವು ಊರು ಬಿಟ್ಟು ಹೋಗಿದ್ದೆ? ಕನ್ನಡಿಯೊಳಗೆ ಕಂಡ ಬದುಕಿನ ಕನಸು ಕೈಗೆ ಸಿಗದೆ ಚೂರುಚೂರಾದ ಮೇಲೂ ಆತ್ಮಹತ್ಯೆ ಮಾಡಿಕೊಳ್ಳದೆ ಬದುಕಿದ್ದೆ? ಮತ್ತೆ ಊರಿಗೇ ಬಂದು ‘ಇಂಥವರೂ ಬದುಕುವ ಧೈರ್ಯ ಮಾಡುತ್ತಾರಲ್ಲ’ ಎಂದು ದಿನಬೆಳಗಾದರೆ ಚುಚ್ಚಿಚುಚ್ಚಿ ಕೊಲ್ಲುತ್ತಿರುವ ಜನರೊಂದಿಗೆ, ಒಡಹುಟ್ಟಿದವರೊಂದಿಗೇ ಎದೆ ಸೆಟೆಸಿ, ತಲೆಯೆತ್ತಿ ಬದುಕುತ್ತಿರುವುದೆ?"

ಆಗೆಲ್ಲ ಅನೂ ಪ್ರತಿದಿನ ಬರುತ್ತಿದ್ದಳು ನಮ್ಮ ಮನೆಗೆ. ಆದರೆ ಲೆಕ್ಕ ಹಾಕಿ ಒಂದೂವರೆ ತಿಂಗಳಷ್ಟೇ. ಊರಿನಲ್ಲಿ ಗುಸುಗುಸು ಹಬ್ಬಿ ಅದರ ಅಸಹ್ಯ ನಾತ ಮಿತಿಮೀರಿದಾಗ ಯಾಕೋ ತಡೆಯಲಾರದೆ ಅನೂ ಬಳಿ ಹೇಳಿದ್ದೇ ತಪ್ಪಾಯಿತು. ನಿನ್ನ ಹೆಸರು ಹಾಳಾಗಬಾರದೆಂದು ಹೇಳಿದೆ ಅನೂ ಎಂದರೆ "ನನ್ನ ಹೆಸರು ಹಾಳಾಗುವುದಕ್ಕೆ ಇನ್ನೇನು ತಾನೆ ಉಳಿದಿದೆ ಹೇಮಾ? ನನಗೆ ಅರ್ಥವಾಗುತ್ತದೆ ಬಿಡು. ನಿನ್ನ ಮನೆಯಲ್ಲೂ ಮೂವರು ಹೆಮ್ಮಕ್ಕಳಿದ್ದಾರೆ ಅಲ್ವ? ನನ್ನ ಕ್ಷಮಿಸು ಹೇಮಾ..."

ಅನೂಗೆ ನನ್ನ ಅಂತರಂಗವನ್ನು ಎಳೆ ಎಳೆಯಾಗಿ ಬಿಡಿಸಿ ಹೇಳುವುದು ಸಾಧ್ಯವಿತ್ತೆ? ಅವಳಿಗದು ನಿಜಕ್ಕೂ ಅರ್ಥವಾಗಿರಲಿಲ್ಲವೆ?

ಅಂತೂ ಅನು ಆನಂತರ ಹದಿನೈದು ಇಪ್ಪತ್ತು ದಿನಗಳಿಗೊಮ್ಮೆ ಬರತೊಡಗಿದಳು. ಚಿಕ್ಕಮ್ಮನಿಗೆ ಅನೂ ಬಂದು ಹೋಗುವುದು ಹಿಡಿಸುತ್ತಿರಲಿಲ್ಲ. ಇದು ಅನೂ ಅರಿವಿಗೆ ಬರುವ ಮಟ್ಟಕ್ಕೂ ಹೋಗಿತ್ತು. ಅನೂ ಎಲ್ಲಿ ಬರುವುದನ್ನೆ ನಿಲ್ಲಿಸಿಬಿಡುತ್ತಾಳೋ ಎಂಬ ಭಯದೊಂದಿಗೇ ಅಂದು ಅದೊಂದು ಪ್ರಶ್ನೆ ಕೇಳಿದ್ದೆ. ಎಷ್ಟು ಕಷ್ಟವಾಗಿತ್ತು ನನಗೆ! ಅನೂ ನನ್ನನ್ನು ಮದುವೆಯಾಗುವ ಬಗ್ಗೆ ನಿಜಕ್ಕಾದರೆ ಯೋಚಿಸಿದ್ದಳೆ? ಯಾರಿಗೆ ಗೊತ್ತು, ಅವಳು ಉತ್ತರ ನೀಡಲಿಲ್ಲ.

ಇದೆಲ್ಲ ನನ್ನೊಳಗೆ ತುಂಬುತ್ತಿದ್ದ ಸಂಕಟ, ನೀಡುತ್ತಿದ್ದ ಹಿಂಸೆಯ ಅರಿವು ಯಾರಿಗೂ ಇರಲಿಲ್ಲ.ನಾನಾಗಿ ಹೇಳಿಕೊಳ್ಳುವಂತೆಯೂ ಇರಲಿಲ್ಲ. ಅಷ್ಟರಲ್ಲಿ ಜಾನಕಿ ಗಂಡನೊಂದಿಗೆ ಮುನಿಸಿಕೊಂಡು ತವರಿಗೆ ಬಂದು ಕೂತಳು. ವಿವೇಕಿಯಾದ ಗಂಡನೇ ಸಿಕ್ಕಿದ್ದ ಅವಳ ಪುಣ್ಯಕ್ಕೆ. ಆದರೆ ಅತ್ತೆ-ಮಾವ ಸ್ವಲ್ಪ ಮಡಿವಂತರು. ನನ್ನ ಭಾವ ಅವರ ಒಬ್ಬನೇ ಮಗ ಬೇರೆ. ನಾನು ಎರಡು ಮೂರು ಬಾರಿ ಅವಳ ಮನೆಗೆ ಓಡಾಡಬೇಕಾಯಿತು.

ಆಗೊಮ್ಮೆ ಜಾನಕಿ ನನ್ನ ಬಳಿ ಹೇಳಿದ್ದಳು. "ಅಣ್ಣಾ ಅನೂನ ಆ ಮನೆಯಲ್ಲಿ ಬಿಟ್ಟು ತಪ್ಪು ಮಾಡಿದೆಯೊ ಏನೋ. ಅಲ್ಲಿ ಅವಳು ದಿನಾ ಚೂರುಚೂರೇ ಸಾಯ್ತಿದ್ದಾಳೆ ಅಣ್ಣ. ಜನ ಬೇರೆ ನಮ್ಮ ಮಾವನೇ ಕುತಂತ್ರ ಮಾಡಿ ನಮ್ಮ ಜಾಗ ಮಾರಿಸಿದ ಹಾಗೆ ರಫಿಯ ವಿಷಯದಲ್ಲೂ ಏನೋ ಮಾಡಿದ್ದಾನೆ ಅಂತೆಲ್ಲ ಆಡಿಕೊಳ್ತಿದ್ದಾರೆ. ಏನಣ್ಣಾ ಇದೆಲ್ಲ" ಎಂದಿದ್ದಳು. "ಅಲ್ಲಾ ಜಾನು, ನಾನಿನ್ನು ಏನು ತಾನೆ ಮಾಡಬಹುದಿತ್ತು ಹೇಳು ಮಾರಾಯ್ತಿ" ಎಂದರೆ ಮೌನಿಯಾದಳು.

ಮತ್ತೆ ಗಂಡನ ಮನೆಗೆ ಹೊರಟು ನಿಂತಾಗ ಹೇಳಿದ್ದಳು. "ಈ ಗಂಡು ಜಾತಿ ಯಾವಾಗಲೂ ಹೆಣ್ಣು ಬೇರೊಂದು ಗಂಡಿನ ಛಾಯೆಯಷ್ಟೇ ಆಗಿರಬೇಕಂತ ಬಯಸುತ್ತೆ ಹೇಮಾ. ಅಪ್ಪ, ಗಂಡ, ಅಣ್ಣ ಎಲ್ಲರೂ. ನೀನು ನಮಗೆ ನಮ್ಮದೇ ವ್ಯಕ್ತಿತ್ವ ಬೆಳೆಸಿಕೊಂಡು ಬದುಕಲು ಬಿಟ್ಟೆ. ಅದರ ಸಾಧಕ ಬಾಧಕಗಳ ಹೊಣೆ ನಮ್ಮದೇ. ನೀನು ನಿನ್ನ ಭಾವನ ಕೈಕಾಲು ಹಿಡಿಯುವ ಹಾಗೆ ಮಾಡಿದ್ದಕ್ಕೆ ಕ್ಷಮಿಸು."

"ನಿನಗೆ ಗೊತ್ತಾ ಜಾನು, ಭಾವ ನಿನ್ನ ತುಂಬ ಪ್ರೀತಿಸ್ತಿರೋದು ನೀನು ಸ್ವಂತ ವ್ಯಕ್ತಿತ್ವ ಇರೊ ಸ್ವತಂತ್ರ ಹೆಣ್ಣಾಗಿರೋದಕ್ಕೇನೇ. ಅಂಥ ಹೆಣ್ಣೆಂದರೆ ಗಂಡಿಗೆ ವಿಚಿತ್ರ ಆಕರ್ಷಣೆ ಕೂಡಾ ಇರುತ್ತೆ ಜಾನು..."

ತುಂಬ ಹೊತ್ತಿನ ಮೌನದ ನಂತರ ಜಾನಕಿ ಮೆಲ್ಲನೆ ಹೇಳಲೋ ಬೇಡವೋ ಎಂಬಂತೆ ಹೇಳಿದ್ದಳು. "ಆಕರ್ಷಣೆಯೇನೋ ಇರುತ್ತೆ, ಅದರ ಅಗತ್ಯನೂ ತಾತ್ಕಾಲಿಕ. ಅಂಥವಳನ್ನು ತಮ್ಮ ಬದುಕಿಗೆ ಸ್ವೀಕರಿಸುವವರು ಅವಳಲ್ಲಿ ಆನಂತರ ಬದಲಾವಣೇನ ಬಯಸ್ತಾರೆ ಅಣ್ಣಾ. ನನ್ನ ಹಾಗೇ ಅವಳದ್ದೂ ಸ್ವತಂತ್ರ ವ್ಯಕ್ತಿತ್ವವಾಗಿತ್ತು. ಆದರೆ ಅದೇ ಅವಳ ಬದುಕನ್ನು ಸಜೀವ ದಹಿಸುವ ಚಿತೆಯಾಗಿಸಿಬಿಟ್ಟಿತು ನೋಡು. ಆ ಎಳೆಯ ಜೀವ ಹೀಗೇ ಕಣ್ಣೆದುರೇ ನಾಶವಾಗುತ್ತಿರುವಾಗ ನಾವೇನೂ ಮಾಡಲಾರದ ಅಸಹಾಯಕರಾಗಿ ಬಿಟ್ಟೆವಾ ಅಣ್ಣ? ಪಾಪ ಅವಳನ್ನು ಯಾರೂ ಅರ್ಥಮಾಡಿಕೊಳ್ಳಲಿಲ್ಲ ಅಣ್ಣಾ" ಎಂದು ಕಣ್ಣೊರೆಸಿಕೊಂಡಳು.

ಆಗಲ್ಲವೆ ನಾನು ಆ ಪತ್ರ ಬರೆದಿದ್ದು?

Either mean or Extream ಎಂದರೇನು? ನನ್ನ ಪ್ರೀತಿ ಯಾಕೆ mean? ಅಲ್ಲಾಂದರೆ ಅದು extream ಕೂಡಾ ಯಾಕೆ!

ಬಂದು ನಿಂತಿದ್ದು ಅಲ್ಲಿಗೇ, ಹೆಳವನ ಹಾದಿಯೊಳು.....

ಆರಂಭ

ಚಿತೆ ಹತ್ತಿಕೊಂಡು ಉರಿಯ ತೊಡಗಿತ್ತು. ಸ್ಟವ್ ಸಿಡಿದೇ ಆಗಿದ್ದೊ, ಸುಟ್ಟುಕೊಂಡು ಸತ್ತಳೋ, ಇವರೇ ಕೊಂದರೋ. ಮುಸಲ್ಮಾನನೊಂದಿಗೆ ಓಡಿ ಹೋದವಳಿಗೆ ಸೂತಕ ಹಿಡಿಯಬೇಕೋ, ಮದುವೆ ಎಂಬುದು ಆಗಿತ್ತೆ, ಅದು ಲೆಕ್ಕಕ್ಕುಂಟೆ ಎಂದೆಲ್ಲ ತಲೆಕೆಡಿಸಿಕೊಂಡು ಗಂಭೀರವಾಗಿ ಗುಜುಗುಜು ಚರ್ಚಿಸುತ್ತಿದ್ದ ಜನರೆಲ್ಲ ಸರಿದು ಹೋಗಿ ತುಂಬ ಹೊತ್ತಾಗಿತ್ತು.

ಹೂವಿನಂಥ ಹೃದಯದ ಹುಡುಗರ ಎದೆ ಹೂವು ಬಾಡುವ ಮುಸ್ಸಂಜೆ ಹೊತ್ತು ಜೀವದೊಳಗಿನ ಕಡಲು ಅಶಾಂತಿಯಿಂದ ಮೊರೆಯತೊಡಗಿತ್ತು.....ಅನೂ....ಅನೂ.....ಅನೂ......


(ಉದಯವಾಣಿ ಸಾಪ್ತಾಹಿಕ ಪುರವಣಿಯಲ್ಲಿ ದಿನಾಂಕ 17/10/1999 ರಂದು ಪ್ರಕಟವಾದ ನನ್ನ ನಾಲ್ಕನೆಯ ಕತೆ)
ಮುಂದೆ ಓದಲು ಇಲ್ಲಿ ಕ್ಲಿಕ್ ಮಾಡಿ...

Saturday, December 24, 2011

ನಾನು ಮತ್ತು ನಾನು

ಯಾರಾದರೂ ಆತ್ಮೀಯರು ಸಿಕ್ಕಿದರೆ ಇದನ್ನೆಲ್ಲ ಮಾತಿಗಿಳಿಸಿ ಶೂನ್ಯಕ್ಕೊಂದು ಅರ್ಥ ನೀಡುತ್ತಾ ಈ ಖಾಲೀತನವನ್ನು ತುಂಬಿಬಿಟ್ಟು ಸಮಾಧಾನ ಪಡೆಯಬಹುದಿತ್ತೇನೊ. ಆದರೆ ಇಲ್ಲಿ ಅಂಥ ಆತ್ಮೀಯರು ಸಿಗುವುದಾಗಲೀ, ಸಿಕ್ಕವರ ಆತ್ಮೀಯತೆಯನ್ನು ಸಾಚಾ ಎಂದು ನಂಬುವುದಾಗಲೀ ಇವತ್ತಿನ ಈ ನನಗೆ ಸಾಧ್ಯವಾಗುತ್ತಿಲ್ಲ. ಇದೇ ದೊಡ್ಡ ಸಮಸ್ಯೆಯೇನೂ ಅಲ್ಲ ಎಂಬಂತೆ ಎಲ್ಲವನ್ನೂ ಮರೆಯುತ್ತ ದಿನಗಳನ್ನು ಕಳೆಯುತ್ತಿದ್ದೇನೆ. ಈ ಎಲ್ಲ ಮರೆಯುವುದರಲ್ಲಿನ ಸುಖವನ್ನು ಕಂಡು ಬೆಚ್ಚಿಬಿದ್ದಿದ್ದೇನೆ. 

ವ್ಯಕ್ತಿತ್ವಕ್ಕೆ ಮುಕುರಿಕೊಂಡ ಕೊಳಕೆಲ್ಲವೂ ನನ್ನ ಬಾಸ್‌ನ ಕ್ಯಾಬಿನ್ನಿನೊಂದಿಗೆ ನೆನಪಾಗುತ್ತವೆ. ತನ್ನ ಘನತೆಯನ್ನು ಬೇರೆ ಬೇರೆ ದೃಷ್ಟಿಗಳಿಂದ ಬಿಂಬಿಸಿ, ಹಿಗ್ಗಿಸಿ ಹಿಗ್ಗಿಸಿ ಕೊರೆದು ನನ್ನಿಂದ ಎಸ್ಸ್‌ಸಾ ಎಸ್ಸ್‌ಸಾ ಎನ್ನಿಸಿಕೊಂಡರೂ ಅದೆಲ್ಲ ಸಾಚಾ ಆಗಿರಲಿಕ್ಕಿಲ್ಲ ಎಂಬ ಅತೃಪ್ತಿಯಿಂದ ಬೇಯುತ್ತಲೇ ಇರುವ ನನ್ನ ಬಾಸ್. ಸಂಜೆ ಹೊತ್ತು ಈ ಬಗ್ಗೆ ಯೋಚಿಸುವಾಗ ಆ ಎಸ್ಸ್‌ಸಾ ಎಸ್ಸ್‌ಸಾ ರೂಪಿಸಿರುವ ಈ ನನ್ನ ಬಗ್ಗೆ ವಾಕರಿಕೆ ಹುಟ್ಟುವುದಿತ್ತು. ಆದರೆ ಈಗ ಇದೆಲ್ಲ ನನಗೆ ಸಹಜ ವ್ಯಾಪಾರವಾಗಿ ಬಿಟ್ಟಿದೆ. 

ಹುಟ್ಟುವುದೇ ಶಾಲೆಗೆ ಹೋಗಲಿಕ್ಕೆಂಬ ಹಾಗೆ ಆತಂಕ, ವಿಸ್ಮಯ, ಖುಷಿ ಮತ್ತು ಸ್ವಾತಂತ್ರ್ಯಗಳ ನಕ್ಷತ್ರಲೋಕದಂತಿದ್ದ ಬಾಲ್ಯವನ್ನು ಚೀಲಕ್ಕೆ ಹಾಕಿಕೊಂಡು ಶಾಲೆಗೆ ಹೊರಡುವುದು.... 

ಕಲಿತಿದ್ದೇ ಹಣ ಸಂಪಾದನೆಗೆಂಬಂತೆ ಹೀಗೆ ಮೇಲಿನವರಿಗೆ ಹಲ್ಲುಗಿಂಜಿ ಕೆಳಗಿನವರಿಂದ ಗಿಂಜಿಸಿಕೊಂಡು ಇಸ್ತ್ರಿ ಮಾಡಿದ ಶರಟು ಪ್ಯಾಂಟುಗಳೊಳಗಿನ ಹರಿದ ಕಾಚಾದ ಹಾಗೆ ಆಫೀಸಿನೊಳಗೆ ನಾನು...... 

ಸಂಜೆಯ ಟ್ರಾಫಿಕ್ಕಿನ ಕಪ್ಪು ಹೊಗೆ ಮತ್ತು ಕತ್ತಲಿನಲ್ಲಿ ಮಿಕಿಮಿಕಿ ನೋಡುವ ಕಣ್ಣುಗಳಂಥ ಲೈಟ್ ಹೊತ್ತಿಸಿಕೊಂಡು ಓಡುವ ವಾಹನ ಜಾಲದಲ್ಲಿ ಶಾಶ್ವತವಾಗಿ ಕಳೆದೇ ಹೋಗಬಹುದಾದ ಭಯದ ಆಳದಲ್ಲಿ.... 

ಜಾಗೃತಗೊಳ್ಳುವ ನಾನೆಂಬ ನಾನು....... 


ಇಲ್ಲಿ, ಈ ಏರುತ್ತಿರುವ ರಾತ್ರಿ ಹೊತ್ತು ಗೋಗರೆಯುವ ಸಮುದ್ರದ ಎದುರು ಮರಳ ರಾಶಿಯ ಮೇಲೆ ಸ್ವಚ್ಛಂದ ಸ್ವತಂತ್ರ ಆಸನದಲ್ಲಿ ಬೀಸುವ ಗಾಳಿಗೇ ಶರಣಾದವನಂತೆ ಕೂತಿರಬೇಕಾದರೆ, ಮನಸ್ಸಿನ ಆಗಸದಲ್ಲಿ ಮುಗ್ಧವಾಗಿ ನಗುವ ಬಾಲ್ಯದೊಂದಿಗೆ ನಾನೇ ಪ್ರತ್ಯಕ್ಷನಾಗಿ ಹುಟ್ಟಿಸುವ ಭಾವನೆ ಖೇದ. 

ಆಗ ಇನ್ನೂ ನನ್ನ ಗೊಗ್ಗರು ಹಲ್ಲು ಅಸಹ್ಯವಾಗಿ ಕಾಣಿಸದ ಹಾಗೆ ನಾಟಕೀಯವಾಗಿ ನಗಲು ಬರುತ್ತಿರಲಿಲ್ಲ. ಹಾಗಾಗಿ ಆ ನಗೆ ಮುಗ್ಧ. ಮತ್ತು ಅದರಿಂದಾಗಿಯೇ ಚಂದ. ಈ ಕಾರಣದಿಂದಾಗಿಯೇ ಅದು ಒರಿಜಿನಲ್ ನಾನು. 

ಹೀಗೆ ಒರಿಜಿನಲ್ ನನ್ನನ್ನು ನಾನು ನನ್ನೊಳಗೇ ಜೀವಂತವಾಗಿಸಿಕೊಳ್ಳುತ್ತ ಸಾಗುವ ಹಾದಿಯಲ್ಲಿ ಚಾಣಕ್ಯರನ್ನು, ಶಕುನಿಗಳನ್ನು ಮೀರಿಸಬಲ್ಲ ಎಂಡಿಗಳು, ಜನರಲ್ ಮ್ಯಾನೇಜರ್‌ಗಳು ಇಲ್ಲ. ತಿಂದದ್ದು ಹೇತು ಹೋಗುವ ಮೊದಲು ದಕ್ಕಿಸಬಲ್ಲುದರ ಖರ್ಚು ದಕ್ಕಿದ್ದಕ್ಕಿಂತ ಹೆಚ್ಚೋ ಕಡಿಮೆಯೋ ಎಂದು ಚರ್ಚಿಸುತ್ತ ಕೂರುವ ಪಂಡಿತರಿಲ್ಲ. ಅವರಿವರು ಆಡಿಕೊಂಡಿದ್ದನ್ನು ಆಡಿರದ ಮಾತುಗಳೊಂದಿಗೆ ಸೇರಿಸಿ ಆಡಿ ಮನಶ್ಶಾಂತಿ ಕೆಡಿಸಿ ಖುಷಿ ಪಡುವವರಿಲ್ಲ. ದೇಶದ ಬಗ್ಗೆ ಮಾತನಾಡಿ ಭಯ ಹುಟ್ಟಿಸಬಲ್ಲವರಿಲ್ಲ. ಏರುವ ಇಳಿಯುವ ಏಣಿಗಳಿಲ್ಲ, ಹಣದ ಹಿಂದೆ ಓಡುವ ತುರ್ತಿಲ್ಲ, ಸುಖಕ್ಕೆ ಅಂತಸ್ತಿಲ್ಲ, ಕಾರ್ಯಕ್ಕೆ ಕಾರಣದ ಹಂಗೂ ಇಲ್ಲ. ಅಥವಾ, ಇವೆಲ್ಲವೂ ಇರುತ್ತವೆ, ನಾನೇ ಅಲ್ಲಿ ಇರುವುದಿಲ್ಲವೇನೊ! 

ಒಂದು ದಿನ ನಾನು ಕಾಲೇಜಿನಲ್ಲಿ ಯಾವುದೋ ಭಾಷಣ ಮಾಡುತ್ತಿದ್ದೆ. ಯಾರದೋ ಪ್ರಸಿದ್ಧ ಭಾವಭಂಗಿ, ಅಲ್ಲಿ ಇಲ್ಲಿ ಕದ್ದು ಪೋಣಿಸಿಕೊಂಡಿದ್ದ ನುಡಿಮುತ್ತುಗಳು.....ಸುತ್ತ ನನ್ನ ಅಭಿಮಾನೀ ಸಹಪಾಠಿಗಳು, ಮುಖ್ಯವಾಗಿ ಹುಡುಗಿಯರು. ಆಗ, ಅಚಾನಕವಾಗಿ ಅವನನ್ನು ನೋಡಿದ್ದೆ. ಯಾರೋ ಕೊಳಕು ಹುಡುಗ. ಹೋಟೆಲಿನವನಿರಬೇಕು ಎನಿಸಿತು, ಆಕ್ಷಣಕ್ಕೆ. ಈಗ ಎಲ್ಲ ನೆನಪುಗಳ ಮಹಾಪೂರವೇ ಅಲೆಅಲೆಯಾಗಿ ಪ್ರವಹಿಸುವಂತೆ ಮಾಡುವ ಆ ಹುಡುಗ ಒಳಗೂ ಹೊರಗೂ ಸರಳನಾಗಿದ್ದ. ಗಿಮ್ಮಿಕ್‌ಗಳು, ನಾಟಕೀಯ ಚಲನೆಗಳು ತಿಳಿದಿರದವ. ಬೆಳೆದಂತೆಲ್ಲ ತಾನು ತನ್ನದೇ ಅಂತರಂಗದೊಳಗೆ unfit animal ಆಗಿ ಬೆಳೆಯಬಲ್ಲ ಲಕ್ಷಣಗಳನ್ನು ಆ ಪೆದ್ದು ನಗೆಯಲ್ಲಿ, ಸಂಕೋಚದ ಮುದ್ದೆಯಂತಿದ್ದ ಆ ಮುಖದಲ್ಲಿ, ಕೊರಳಲ್ಲಿದ್ದ ಮಾಸಿದ ಕಾಶೀದಾರದಲ್ಲಿ, ಹಳೆಯ ಅಂಗಿ ಮತ್ತು ಖಾಕಿ ಚಡ್ಡಿಯಲ್ಲಿ ಹಾಗೂ ಆ ಚಡ್ಡಿಯ ಕಾಲುಗಳಿಂದ ಹೊರಬಂದ ಸೊಟ್ಟ ಕಾಲುಗಳನ್ನಿಟ್ಟ ರೀತಿಯಲ್ಲಿ - ಇವನ್ನೆಲ್ಲ ಯಾರಿಗೂ ಗೊತ್ತಾಗದಂತೆ ಅಡಗಿಸಿಟ್ಟುಕೊಳ್ಳಬೇಕು ತನ್ನಲ್ಲೆ ಎಂಬ ನಾಗರಿಕ ಪ್ರಜ್ಞೆಯೇ ಇಲ್ಲದೆ - ಬದಲಾಗಿ ಈ ಬೆದರುಗೊಂಬೆಯ ವೇಷವನ್ನು ಜಗತ್ತಿಗೇ ಸಾರುವವನ ಹಾಗೆ ಎಲ್ಲರಿಗಿಂತ ಮುಂದೆ ನಿಂತು ನನ್ನನ್ನೇ ನೋಡುತ್ತ ನಗುತ್ತಿದ್ದ, ಗೊಗ್ಗರು ಹಲ್ಲುಗಳನ್ನು ತೋರಿಸುತ್ತ. ಕೊನೆಗೂ ಆ ಹುಲ್ಲುಗಳನ್ನೇ ನೋಡುತ್ತ ಮಾತು ಮುಂದುವರಿಸಿದ್ದ ನನಗೆ ಹೊಳೆಯಿತು, ಆ ಹುಡುಗ ನಾನೇ ಆಗಿದ್ದೆ! 

ಎಂಥ ಆಘಾತ! ಫಕ್ಕನೆ ಎಚ್ಚರವಾಗಿತ್ತು ನನಗೆ. ಆಗಿನ್ನೂ ಮುಂಜಾವದ ನಾಲ್ಕುಗಂಟೆ. ನನ್ನೊಳಗೇ ನಾನು ಭಾಷಣ ಮಾಡಿಕೊಳ್ಳುತ್ತ ಬೆಳೆಸಿಕೊಂಡಿದ್ದ ಢಾಂಬಿಕತೆಯನ್ನು ಇದಕ್ಕಿಂತ ತೀಕ್ಷ್ಣವಾಗಿ ವಿಡಂಬಿಸಬಲ್ಲ ಇನ್ನೊಂದು ಪ್ರತಿಮೆ ಸಾಧ್ಯವಿಲ್ಲದ ಹಾಗೆ ಕನಸು ನನ್ನನ್ನು ಕಂಡು ಕೇಕೇ ಹಾಕಿ ನಕ್ಕಿರಬಹುದು. ನನಗೆ ತುಂಬ ಅವಮಾನವಾಗಿತ್ತು. ಆನಂತರ ನಾನು ಭಾಷಣ ಮಾಡುವುದನ್ನು ಬಿಟ್ಟುಬಿಟ್ಟೆ. 

ಮೇಲಾಗಿ, ಆನಂತರದ ದಿನಗಳಲ್ಲಿ ಆ ಹುಡುಗ ನನ್ನನ್ನು ಬಿಡಲಿಲ್ಲ. ಆಗಾಗ ನಾನೇ ಅವನನ್ನು ಭೇಟಿ ಮಾಡುವುದು ಸುರುವಾಯ್ತು. ಹೀಗೆ ಕಡಲಿನ ಎದುರು ದಟ್ಟವಾಗುತ್ತ ಹೋಗುವ ಕತ್ತಲೆಯಲ್ಲಿ, ಸಮುದ್ರದ ನೀರು ಕೂಡಾ ಕಪ್ಪಾಗುತ್ತ ನಿಗೂಢತೆಯನ್ನು ಒಳಗೂ ಹೊರಗೂ ಉಕ್ಕಿಸತೊಡಗುವಾಗ ನಾನು ನನ್ನ ಗರ್ಭದೊಳಗೆ ಬೆಳೆಯತೊಡಗುತ್ತಿದ್ದೆ. ಅಲ್ಲಿ ಆ ವಿಚಿತ್ರ ಸನ್ನಿವೇಶದಲ್ಲಿ, ಕೈಯಲ್ಲಿ ಸಿಗರೇಟ್ ಇಲ್ಲದಿದ್ದರೂ ಇದ್ದ ಹಾಗೆ. ಬಿಯರ್ ಕುಡಿಯುತ್ತಿರುವ ಹಾಗೆ, ಗುಟುಕು ಗುಟುಕಾಗಿ...... ಏನೋ ಆತಂಕ, ಭಯ, ಆಳದಲ್ಲಿ ತಮ್ಮಟೆ ಬಡಿಯುತ್ತಿರುವ ಹಾಗೆ.... 

ಹೆಚ್ಚಾಗಿ ಅವನು ಊರಿನ ಕಸದ ಹೊಂಡದಲ್ಲಿ ಖಾಲಿ ಸಿಗರೇಟು ಪ್ಯಾಕೆಟ್‌ಗಳನ್ನೋ, ತಿಂದೆಸೆದ ಚಾಕಲೇಟಿನ ರಾಪರುಗಳನ್ನೋ ಆರಿಸುತ್ತಾ ಇರುತ್ತಿದ್ದ. ಈಗಲೂ ನನಗೆ ಬೀಡ ಜಗಿದು ಉಗಿದ ಹೊಗೆಸೊಪ್ಪು, ಬೀಡಿ ಸಿಗರೇಟುಗಳ ತುಂಡು, ಎಸೆದ ಮೊಟ್ಟೆಗಳು, ಸತ್ತ ಇಲಿ, ನಾಯಿ ಬೆಕ್ಕುಗಳ ಅರೆಬರೆ ದೇಹ, ಹಾಳಾಗಿ ಎಸೆದ ಅನ್ನ, ಸಾಂಬಾರು ಇವನ್ನೆಲ್ಲ ಅರೆಬರೆ ಸುಡಲು ಪ್ರಯತ್ನಿಸುತ್ತಿದ್ದ ಬೆಂಕಿಯ ಹೊಗೆಯ ಘಾಟು ವಾಸನೆ ಮೂಗಿನಲ್ಲೆ ಎಲ್ಲೊ ದಾಸ್ತಾನು ನಿಂತ ಹಾಗಿದೆ. ಆ ಹೊಂಡದ ಬೆಂಕಿಯಲ್ಲಿ ನಮ್ಮೂರ ಸಿನೆಮಾ ಟಾಕೀಸಿನ ಕಟ್ ಆದ ಫಿಲಂ ರೀಲುಗಳ ಆಸೆಯಿಂದ ಕಾಲಿಕ್ಕಿ ಸುಟ್ಟುಕೊಂಡ ನೆನಪಿದೆ. ಆ ನೆನಪಿನಿಂದ ಎಷ್ಟೋ ಸಾರಿ ಅಪ್ರಯತ್ನ ಕೈ ಕಾಲಿನತ್ತ ಸರಿಯುವುದೂ ಕಾಲಿನ ಶೂ ನನ್ನನ್ನು ಒಮ್ಮೆಗೇ ಎತ್ತಿ ತಂದು ಈಚೆಯ ಜಗತ್ತಿಗೆ ಎಸೆಯುವುದೂ ನಡೆದಿದೆ. ಕಾಲೇಜು ಮೆಟ್ಟಿಲು ಹತ್ತುವವರೆಗೂ ಕಾಲಿಗೆ ಚಪ್ಪಲಿ ಕೂಡಾ ಇರಲಿಲ್ಲ ನನಗೆ. 

ಒಂದೊಂದು ಸಲ ಅವನು ಊರ ಬೀದಿಯ ಎಡಕ್ಕೆ ಸಾಲಾಗಿ ಬೆಳೆದ ಹೆಬ್ಬಲಸಿನ ಮರಗಳ ನೆರಳಿನಲ್ಲಿ ಸಾಮಾನು ತರುವ ಚೀಲ ಹಿಡಿದುಕೊಂಡು ಹೋಗುತ್ತಿರುತ್ತಾನೆ. ಆಗ ಅವನು ಏನನ್ನು ಯೋಚಿಸುತ್ತಿರುತ್ತಾನೋ! ಹುಚ್ಚು ಹಿಡಿದು ಊರಿಡೀ ಸುತ್ತುತ್ತಿರುವ ತನ್ನ ಅಕ್ಕನ ಬಗ್ಗೆ ಇರಬಹುದು. ಯಾಕೆಂದರೆ ಅವಳೇ ಆ ಬೀದಿಯಲ್ಲಿ ಅವನಿಗೆದುರಾಗಿ ಸಿಕ್ಕುವುದಿತ್ತು. ಅಥವಾ ಸೂಳೆಯರ ಹಾಸಿಗೆಯಲ್ಲಿ ಕುಡಿಯುತ್ತಾ ಒರಗಿಕೊಂಡಿರಬಹುದಾದ ತನ್ನ ಅಪ್ಪನ ಬಗ್ಗೆ ಇರಬಹುದು. ಬೀದಿಯಲ್ಲಿ ಸರಕಾರೀ ಕೆಂಪು ಬಸ್ಸು ಓಡಿದಾಗೆಲ್ಲ ಅದರ ಡ್ರೈವರ್ ತನ್ನಪ್ಪನೇ ಇರಬಹುದೆ ಎಂಬ ಆಸೆ, ಕಾತರ ಆ ಮುಖದಲ್ಲಿ ಯಾರಿಗಾದರೂ ಕಾಣುವಂತಿದೆ. ಅಥವಾ ಅಮ್ಮನ ಟಿ.ಬಿ. ಅವಳನ್ನು ತಮ್ಮ ಪಾಲಿಗೆ ಉಳಿಸಬಹುದೇ ಎಂಬ ಚಿಂತೆಯಲ್ಲೋ, ತನ್ನ ಮನೆಯವರ ಅಸಹಾಯಕ ಸ್ಥಿತಿಯ ಲಾಭ ಎತ್ತುತ್ತಿರುವ ಊರ ಕೊಳಕು ಗಂಡಸರ ಬಗ್ಗೆಯೋ, ಇಂಥ ಕೊಳಕಿನಲ್ಲಿ ಬಲಿಯಾಗುತ್ತಿರುವ ಅಕ್ಕಂದಿರ ಬಗ್ಗೆಯೋ ಯೋಚಿಸುತ್ತಾ ಮುದುಕನಾಗುತ್ತಿರುವ ಹಾಗೆ ಕಾಣಿಸಿಕೊಳ್ಳುತ್ತಾನೆ. ರಾತ್ರಿ ಹಾಸಿಗೆಯಲ್ಲಿ ಎಲ್ಲರೂ ಮಲಗಿದ ಮೇಲೆ, ಕತ್ತಲಿನಲ್ಲಿ ತನ್ನ ಅಮ್ಮ ಏನಾದರೂ ಸತ್ತೇ ಹೋದರೆ ಎಂದು ಯೋಚಿಸಿದ್ದೇ ಬಿಕ್ಕಿ ಬಿಕ್ಕಿ ಅತ್ತು ದಿಂಬು ತೋಯಿಸುತ್ತಿದ್ದ ನೆನಪುಗಳೊಂದಿಗೆ ಅವನು ಪ್ರತ್ಯಕ್ಷನಾದಾಗ ಕರುಳು ಮಗುಚಿದಂತಾಗುತ್ತದೆ. ಕಳೆದುಕೊಂಡಿದ್ದು ಕಳೆದುಕೊಳ್ಳಲೇ ಬೇಕಾದುದನ್ನೆ ಅಥವಾ..... 

ಸಂಬಂಧಿಗಳಿಗೆ ಬೇಡದವರಾಗಿ, ಜಾತಿಗೆ ಬಹಿಷ್ಕೃತರಾಗಿ, ಊರಿನ ಅವಕಾಶವಾದಿಗಳಿಗೆಲ್ಲ ಬಲಿಯಾಗುವ ಸಂದರ್ಭದಿಂದ ಯಥಾನುಶಕ್ತಿ ತಪ್ಪಿಸಿಕೊಳ್ಳುತ್ತಾ ಸವೆಸಿದ ಹೇಡಿ ಬದುಕಿನಲ್ಲಿ ಪ್ರೀತಿಸಬಲ್ಲ ಸಾಧ್ಯತೆ ಕೂಡ ಇದ್ದಿದ್ದೇ ಆಗಿನ ನನ್ನ ಚೇತನ-ಶಕ್ತಿ ಆಗಿತ್ತೆ? 

ತಾನು ಮಾಡಿದ ಸಹಾಯಕ್ಕೆ ಪ್ರಾಯಶ್ಚಿತ್ತವಾಗಿ ನನ್ನ ಹೆಸರಿನಲ್ಲಿ ಸ್ವ-ಉದ್ಯೋಗದ ಹೆಸರಿನಲ್ಲಿ ಐವತ್ತು ಸಾವಿರ ಸಾಲ ತೆಗೆದು ಶಾಲೆಯ ಸರ್ಟಿಫಿಕೇಟುಗಳಿಗೆ ಸೀಲು ಹಾಕಿಸಿ ಮನೆಯಿಂದ ಹೊರದಬ್ಬಿದ ಮಾವನಿಗೆ ಸೆಡ್ದು ಹೊಡೆದು ನಿಂತ ಮೇಲೆ ಆ ಪ್ರಶ್ನೆ ಎದ್ದಿತು. ಅದೇ ಮೊದಲಿಗೆ ಎದ್ದ ಪ್ರಶ್ನೆ ಇರಲಾರದು. 

ಈ ಜೀವನದಲ್ಲಿ ಬದುಕಿನಲ್ಲಿ ನಮಗೆ ಬದುಕಬೇಕು, ಏನನ್ನಾದರೂ ಸಾಧಿಸಬೇಕು ಎಂದೆಲ್ಲ ಅನಿಸುವಂತೆ ಮಾಡುವ, ತೊಡಗಿಸುವ, ಉತ್ಸಾಹ ಸ್ಫೂರ್ತಿ ತುಂಬುವ, ಕ್ರಿಯಾಶೀಲತೆಯನ್ನು ಉಂಟು ಮಾಡಿ ಜೀವವಿರೋಧಿ ಮತ್ತು ಜೀವನ ವಿಮುಖೀ ಧೋರಣೆಗಳಿಂದ ದೂರವಿರಿಸಬಲ್ಲ ವಸ್ತು ಅಥವಾ ಸಂಗತಿ ಯಾವುದು? ಯಾಕೆ ಬದುಕಬೇಕೆಂದು ನನಗನ್ನಿಸುತ್ತಿರುವ ಈ ಘಳಿಗೆಯಲ್ಲೇ ನನ್ನ ಗೆಳೆಯರು, ಸಂಬಂಧಿಕರು, ಅವರಿವರು ಧೀಗುಟ್ಟುತ್ತ ಹಣದ ಬೆನ್ನು ಹಿಡಿದು ಓಡುತ್ತಿದ್ದಾರೆ. ನನ್ನ ಇರುವಿಕೆಯನ್ನು ಕೂಡಾ ಲಕ್ಷ್ಯಕ್ಕೆ ತೆಗೆದುಕೊಳ್ಳದು ಹಾಗೆ ಈ ಜಗತ್ತಿಗೆ ಜಗತ್ತೇ ಚಲಿಸುತ್ತಿರುವಾಗ ನಾನೊಬ್ಬ ನಿಂತಲ್ಲೇ ಒಳಗೊಳಗೇ ಇಳಿಯುತ್ತಾ ನಾಶವಾಗುವ ಬಗ್ಗೆ ಯೋಚಿಸುತ್ತಿರುವುದು ಎಂಥ ವಿಚಿತ್ರ! 

ನನ್ನಂಥ ಮತ್ತಷ್ಟು ಮಂದಿ ಇರಬಹುದಾದರೂ ನಾವುಗಳೆಲ್ಲರೂ ಒಂಟಿಯಾಗಿಯೇ ನಿಂತು ಕೇಳಿಕೊಳ್ಳುತ್ತಿರುವ ಪ್ರಶ್ನೆ ಉಳಿದವರಿಗೆಂದೂ ಎದುರಾಗದೇ ಹೋದದ್ದು ಮತ್ತು ನಮಗೇ ಎದುರಾದದ್ದು ಒಳ್ಳೆಯದಕ್ಕೊ ಕೆಟ್ಟದ್ದಕ್ಕೋ ಅರಿಯಲಾರದ ಆ ಸ್ಥಿತಿಯಲ್ಲಿ ಆ ಪ್ರಶ್ನೆಯನ್ನು ಬದಿಗೆ ಸರಿಸಿ ಬದುಕುವ ಸಾಧ್ಯತೆ ಇದ್ದಾಗ್ಯೂ ಚಲನೆಯನ್ನು ಇಚ್ಛಿಸುವ ಸ್ಥಿತಿಗೆ ನಾನು ತಯಾರಾಗಲಿಲ್ಲ. ನನ್ನೊಳಗೇ ಇಳಿಯುವುದು ಹೆಚ್ಚು ಸುಖಕರವಾಗಿತ್ತು. 

ನಿರುಪಯೋಗಿ ಜೀವಿಯಾಗಿ ಪರಾನ್ನ ತಿನ್ನುತ್ತ ಒಂದು ಉದ್ಯೋಗಕ್ಕಾಗಿ ಶ್ರೀಮಂತರ ಬಂಗಲೆಗಳ ಕೋಟೆಗಳಂಥ ಕಾಂಪೌಂಡಿನ ಭಾರೀ ಗೇಟುಗಳನ್ನು ತೆಗೆದೂ ಹಾಕಿ, ಘೂರ್ಕನಿಗೆ, ನಾಯಿಗಳಿಗೆ, ಒಳಗಿನ ಮಹಾ ವ್ಯಕ್ತಿಯ ಜಬರ್ದಸ್ತಿಗೆ ಹೆದರಿ ಹೆದರಿ ಕುಬ್ಜನಾಗುತ್ತಾ; ಇಂಥ ಪ್ರತಿ ಭೇಟಿಯ ನಂತರವೂ ವಾಪಾಸಾಗುವ ಹಾದಿಯಲ್ಲಿ, ಮನೆಯೊಳಗೆ ಹಾದಿ ಕಾಯುತ್ತ ಕೂತ ಮುದುಕಿ ಅಮ್ಮನ ಬಳಿ, ಮುದುಕಿಯಾಗುತ್ತಿರುವ ಅಕ್ಕನ ಬಳಿ ಎಂಥ ಕತೆಕಟ್ಟಿ ಹೇಳಲಿ ಎಂದು ಯೋಚಿಸುತ್ತಾ ನನ್ನ ಕಲ್ಪನೆಗಳೆಲ್ಲ ಸುಡುಸುಡು ಬಿಸಿಲಿಗೆ ಕರ್ರಗೆ ಕರಗುತ್ತಾ ಹೋಗುವುದನ್ನು ನೋಡುವುದು ನನ್ನ ಹೆಣವನ್ನು ನಾನೇ ಕಂಡಂತೆ. ‘ನೋಡೋಣ’ ಎಂದರು, ‘ಮಾಡೋಣ’ ಎಂದರುಗಳಂಥ ಸುಳ್ಳುಗಳನ್ನು ಕ್ರಮೇಣ ಸ್ವತಃ ನಾನೂ ನಿಜವೆಂದೇ ನಂಬುತ್ತ ದಿನಗಳನ್ನು ನಿಜಕ್ಕೂ ದೂಡುತ್ತಲೋ ದಬ್ಬುತ್ತಲೋ ಇದ್ದಾಗ ಬದುಕುವಂತೆ ಪ್ರೇರೇಪಿಸಬಲ್ಲ ಯಾವುದೂ ಇರಲಿಲ್ಲ. ಆಗ ಡಾಯರಿ ತುಂಬ ನಾನು ಅಕ್ಷರಗಳ ರೂಪಕ್ಕಿಳಿದೆ. ನನ್ನ ಕನ್ನಡ ಭಾಷೆ ಚೆನ್ನಾಗಿತ್ತಂತೆ. ಕನ್ನಡ ಲೆಕ್ಚರರ್ ಹೇಳಿದ್ದರು. ಸಂದರ್ಶನಕ್ಕೆ ಕರೆದಿದ್ದ ಯಾವುದೋ ಪತ್ರಿಕೆಯ ಸಂಪಾದಕನೂ ಹೇಳಿದ್ದ. ಆದರೆ ಕೆಲಸ ಕೊಟ್ಟಿರಲಿಲ್ಲ. 

ಒಂದು ಘಟನೆ; ಅದು ಘಟಿಸಿದ ಕಾಲ; ಆ ಕಾಲದ ಸ್ಥಿತಿ, ಪರಿಸರ, ಸ್ಥಳ ತಾಪಮಾನ; ಅದರ ಪರಿಣಾಮ; ಎಲ್ಲ ಆ ಕ್ಷಣದ ಮನಸ್ಥಿತಿ. 

ಎಲ್ಲವುಗಳ ಅಥವಾ ಇಲ್ಲಿ ಬಿಟ್ಟು ಹೋದ ಇನ್ನೂ ಕೆಲವು ವಿಶಿಷ್ಟ ಸಂಗತಿಗಳ ಸಮಷ್ಟಿ ಘನೀಕರಿಸಿ ಕೊಟ್ಟ - ಕೊಡುವ ಫಲ. ಪ್ರತಿಯೊಂದೂ ಚರ. ಯಾವುದೂ ಈಗಿದ್ದಂತೆ ಇನ್ನೊಂದು ಕ್ಷಣದಲ್ಲಿ ಇರುವುದಿಲ್ಲ. ಯಾವ ನಿರ್ದಿಷ್ಟ ಕ್ಷಣವನ್ನೂ ಯಾವ ನಿರ್ದಿಷ್ಟ ಮನಸ್ಥಿತಿಗೆ ಮರು ಹೊಂದಿಸಲಾರ ಮನುಷ್ಯ. ಈ ಕ್ಷಣ ನಾನು ಏನನ್ನೋ ಕಳಕೊಂಡ ಸಂಕಟದಲ್ಲಿ, ಅದನ್ನು ಶಬ್ದಗಳಿಗೆ ಇಳಿಸಲಾರದ ಚಡಪಡಿಕೆಯಲ್ಲಿ ನರಳುತ್ತಿರುವಾಗ ಇದಕ್ಕೆಲ್ಲ ಮೂಲವಾದ ವಸ್ತುವೋ, ವ್ಯಕ್ತಿಯೋ ಬೇರೆಯೇ ಸಂಭವನೀಯ ಸಮಷ್ಟಿ ಘನೀಕರಿಸಿಕೊಟ್ಟ ಅವಸ್ಥೆಯಲ್ಲಿ ಇರುತ್ತದೆ ಮತ್ತು vice versa. ವಿಚಿತ್ರವಾದ, ಸ್ಥಿರವೆನ್ನಿಸಿಯೂ ಅಸ್ಥಿರವಾದ ಈ ಮನಸ್ಸೆಂಬ ವಿಪರೀತವನ್ನು ಮನುಷ್ಯ ಹೊರಬೇಕಾಗಿ ಬಂದಿದೆಯಲ್ಲಾ ಎಂದು ವ್ಯಥೆಯಾಗುತ್ತದೆ. 

ಯಾವ ಪ್ರೀತಿ, ಆತ್ಮೀಯತೆ ಇತ್ಯಾದಿಗಳೂ ಶಾಶ್ವತವಲ್ಲ, ಅನುಪಮವಲ್ಲ, ನಿಸ್ಸಾರ್ಥವಲ್ಲ, ಸ್ಥಿರವಲ್ಲ ಎಂದು ತಿಳಿದೂ ತಿಳಿದೂ ಪ್ರತಿಯೊಬ್ಬರೂ ಒಂದಿಷ್ಟು ಪ್ರೀತಿಗಾಗಿ ಸ್ನೇಹಕ್ಕಾಗಿ ಬಾಯ್ದೆರೆದು ಬಾನತ್ತ ಆರ್ತವಾಗಿ ಮೊರೆಯಿಡುತ್ತಲೇ ಅಂಥದ್ದೇನೂ ಇಲ್ಲವೇ ಇಲ್ಲ ಎಂಬಂತೆ ಗರಿಗರಿ ಬಟ್ಟೆಯೊಳಗೆ, ನಾಗರಿಕ ವೇಷಭೂಷಣಗಳೊಂದಿಗೆ ಹಣದ ಹಿಂದೆ ಓಡುತ್ತೇವೆ. ಅತೃಪ್ತಿಯಲ್ಲಿ ಬೇಯುತ್ತಾ ನರಳುತ್ತಾ ಇಲ್ಲೆಲ್ಲೊ ನಿರ್ದಿಷ್ಟು ಶ್ರುತಿಗೆ ಸಿಕ್ಕಲಾರದೆ ಕೈ ತಪ್ಪುತ್ತಿರುವ ಹಾಡಿನಲ್ಲಿ ಕಳೆದು ಹೋದ ಏನನ್ನೋ ಕಂಡಂತಾಗಿ ಅಂತರ್ ಪಿಶಾಚಿಗಳಾಗುತ್ತೇವೆ. 

ಎಲ್ಲರೂ......... 

ಸತ್ಯ, ಸೌಂದರ್ಯ ಮತ್ತು ನ್ಯಾಯವನ್ನು ನಮ್ಮೊಳಗಲ್ಲದೆ ಹೊರಗೆ ಅರಸಬಾರದಂತೆ. ಪ್ರೇಮವನ್ನು ಇಲ್ಲಿ ಸೇರಿಸಲು ಆ ಮಹಾವ್ಯಕ್ತಿ ಮರೆತಿರಬೇಕು. 

ಹೀಗೆಲ್ಲ ನನ್ನನ್ನು ನಾನು ಸರಿಯಾಗಿ ಕಂಡುಕೊಳ್ಳುವ ತೆವಲು ಹತ್ತಿ ಬರೆಯುತ್ತ ಹೋದಂತೆಲ್ಲ ಒಂದು ಹಂತದಲ್ಲಿ ಒಂದು ಅನುಮಾನ ಎದ್ದುದಕ್ಕಾಗಿ ಡಾಯರಿ ಬರೆಯುವುದನ್ನು ನಿಲ್ಲಿಸಿದೆ. ಆ ಅನುಮಾನ; ಬರೆದದ್ದೆಲ್ಲ ನಾನಾಗಿದ್ದೇನೆಯೆ ಅಥವಾ ನಾನು ಏನಾಗಿದ್ದೇನೋ ಅದನ್ನೆ ಬರೆದಿದ್ದೇನೆಯೆ ಎಂಬುದು. 

ಬರೆಯುತ್ತ ಸಾಗಿದಂತೆಲ್ಲ ನನಗೆ ನಾನು ಪ್ರೀತಿಸಿದ್ದೇನೆಂದು ಅನ್ನಿಸಿದ್ದ ರಜನಿಯನ್ನು ಪ್ರೀತಿಸಿದ್ದ ಬಗ್ಗೆಯೇ ಅನುಮಾನಗಳೆದ್ದೆದ್ದಿವು. ಮನಸ್ಸಿಗೇ ತೆಗೆದುಕೊಂಡಿದ್ದ ಯಾರು ಯಾರನ್ನೋ ಬಹಳವಾಗಿ ಹಚ್ಚಿಕೊಂಡಿದ್ದ ಅರಿವಾಗಿತ್ತು. ರಜನಿ ಎಂದುಕೊಂಡು ಪ್ರೀತಿಸಿದ್ದು ರಜನಿಯನ್ನೆ ಅಥವಾ ಭಾವನಾಳನ್ನೆ ಎಂಬ ಗೊಂದಲವಿತ್ತು. ಚಂದ ಎನಿಸಿದವರು, ನನಗೇ ಬೇಕು ಎನಿಸಿದವರು, ಸ್ಪಂದಿಸಿದವರು, ಆಟವಾಡಿದವರು ಎಲ್ಲರ ಪಟ್ಟಿ ಉದ್ದವಾದಾಗ ನಾನು ಲಂಪಟನಿರಬಹುದೆ ಎಂಬ ಅನುಮಾನ.  

ಭಾವನಾಳನ್ನು ಪ್ರೀತಿಸಲು ಆಯ್ದುಕೊಂಡಿದ್ದು ಹೈಸ್ಕೂಲಿನಲ್ಲಿ. ಗೆಳೆಯರೆಲ್ಲ ಒಬ್ಬೊಬ್ಬರನ್ನು ಆಯ್ದುಕೊಂಡು ಖುಷಿಪಡುತ್ತಿದ್ದಾಗ, ನಾನು ತಡ ಮಾಡಿದರೆ ಬೇರೆ ಯಾರಾದರೂ ಭಾವನಾಳನ್ನೆ ಆರಿಸಬಹುದಾದ ಭಯಕ್ಕೆ. ನಮ್ಮದೇ ಜಾತಿಯ ಭಾವನಾ ಅದೇ ಕಾರಣಕ್ಕಾಗಿ, ಜಾತಿಯಿಂದ ತಿರಸ್ಕೃತರಾದ ನಮಗೆ ಹೇಳಿಸಿದವಳಲ್ಲ ಎಂಬುದು ಅರ್ಥವಾಗಲು ಹೆಚ್ಚು ಕಾಲ ಹಿಡಿಯಲಿಲ್ಲ. ಅಕ್ಕಂದಿರ ಹೆಸರು ಬೇರೆ ಕೀಳು ಜಾತಿಯ ಹುಡುಗರ ಹೆಸರಿನೊಂದಿಗೆ ಊರಿಡೀ ಗುಲ್ಲಾಗುತ್ತಿದ್ದ ದಿನಗಳು. ಯಾರೊಬ್ಬಳೂ ಮದುವೆಯ ಮಟ್ಟಕ್ಕೆ ಮುಟ್ಟುವ ದಿನವೂ ದೂರವಿರಲಿಲ್ಲ. ಮನೆಯಲ್ಲಿ ನಿರಂತರ ಗೌಜಿ-ಬೊಬ್ಬೆ-ಬೈಗುಳಗಳು. ಅಳು, ನಿತ್ಯ ರಂಪಾಟ. ಬಿಗುಮಾನದ ಸುಂದರಿ ಭಾವನಾ ದಿನದಿನವೂ ದೂರ ದೂರ. ಸಾಲದೆಂಬಂತೆ ಅವರು ಸಿರಿವಂತಿಕೆಯ ಮೆಟ್ಟಿಲೇರತೊಡಗಿದರು. 

ನನ್ನ ಮಗಳನ್ನು ಮದುವೆಯಾಗ್ತೀಯ ಎಂದು ಭಾವನಾಳ ಅಮ್ಮ ಕೀಟಲೆ ಮಾಡುತ್ತಿದ್ದ ಪ್ರಶ್ನೆಯ ನೆನಪುಗಳು ನನ್ನಲ್ಲಿ ಗಾಢವಾಗ ತೊಡಗಿದ ಹಾಗೆ ಭಾವನಾಗೂ ಅನಿಸುವ ಹಾಗಿದ್ದರೆ.....ನನ್ನ ಮನದಂಗಳದ ಪ್ರೀತಿಯ ಹೂವುಗಳೆಲ್ಲ ಬಿಸಿಲಿನಲ್ಲಿ ಬಾಡುತ್ತ ಸಂಜೆಯ ತನಕ ಕಾದೇ ಉಳಿದವು ಒಣಗಿ. 

SHE IS GOING ಎಂದಷ್ಟೇ ಬರೆದು ಯಾರೋ ಹತ್ತಿರದವರು ಸತ್ತ ಹಾಗೆ ಸೂತಕದ ಕಳೆ ಹೊತ್ತು ನನ್ನ ಬೇಯುತ್ತಿದ್ದ ಹೃದಯದೊಂದಿಗೆ ಈ ಕಡಲಿನ ಎದುರು ಬಿದ್ದುಕೊಂಡಿದ್ದೆ ಆವತ್ತು. ಭಾವನಾಳ ಮದುವೆಯ ವಾರ್ತೆ ಕಿವಿಗೆ ಬಿದ್ದ ದಿನ. 

ರಜನಿ ಇಷ್ಟವಾದದ್ದು ಅವಳು ಭಾವನಾಳನ್ನೇ ಹೋಲುತ್ತಾಳೆಂಬ ಕಾರಣಕ್ಕೆ. ಮುಂದೊಂದು ದಿನ ತಿಳಿದುಹೋಗಿತ್ತು. ನನ್ನೊಳಗಿನ ಭಾವನಾಳಾಗಲೀ, ರಜನಿಯಾಗಲೀ ವಾಸ್ತವದ ರಜನಿಯೋ ಭಾವನಾಳೋ ಆಗಿರುವ ಸಾಧ್ಯತೆಯಿಲ್ಲ - ಎಂಬ ಸತ್ಯ. ನನ್ನ ಇಷ್ಟ, ಅಗತ್ಯ ಗುಣಗಳನ್ನೆಲ್ಲ ಆರೋಪಿಸಿ ಮನಸ್ಸೇ ನಿರ್ಮಿಸಿಕೊಂಡ ಯಾವ ಹೆಣ್ಣೂ ಈ ಜಗದ ಮಣ್ಣಿನ ಸೃಷ್ಟಿಯೂ ಆಗುವ ಸಾಧ್ಯತೆ ಇಲ್ಲ. ಎಲ್ಲ ಭಾವನೆಗಳೂ ಭ್ರಮೆಗಳು. 

ನಿನ್ನ ಸುಂದರ ಕಪ್ಪು ಕಂಗಳಲ್ಲಿ ನನ್ನ ನಾ ಕಂಡ ದಿನವೇ ನನ್ನ ಪುಟ್ಟ ಹೂವಂಥ ಹೃದಯದಲ್ಲಿ ನಿನ್ನ ನಾ ಕಂಡುಕೊಂಡಿದ್ದು ನನ್ನದೇ ತಪ್ಪು, ಕ್ಷಮಿಸಿಬಿಡು ಗೆಳತಿ ಎಂದು ಮುಂದೊಂದು ದಿನ ನಾನು ಬರೆದುಕೊಂಡು ಪಟ್ಟ ಸಮಾಧಾನ ಬಹುಶಃ ರಜನಿಯನ್ನೇ ಮದುವೆಯಾಗಿದ್ದರೂ ದಕ್ಕುತ್ತಿತ್ತೋ ಇಲ್ಲವೋ! ನನ್ನನ್ನು ರಜನಿಯ ಹಾಗೆ ನೋಡಬಲ್ಲ ಒಂದು ಹೆಣ್ಣು ಜೀವ ಈ ಭೂಮಿಯ ಮೇಲಿರಬಹುದೆಂಬ ಭರವಸೆಯನ್ನೇ ಕಳೆದುಕೊಂಡಿದ್ದ ಕಾಲಕ್ಕೆ ಹಾಗೆ ಮರೆಯಿಂದ ಓರೆಯಾಗಿ ತುಂಟಿಯ ಹಾಗೆ ಮಿಂಚು ಹರಿಸಿದ ರಜನಿ.....ಅವಳ ತುಂಬು ಕಣ್ಣುಗಳು.... 

ನಾನೊಬ್ಬ ಫೂಲ್ ಎಂಬಂತೆ ತಣ್ಣಗೆ ಮದುವೆಯಾಗಿ ಹೋದ ರಜನಿ ನನ್ನೊಳಗಿನಿಂದ ಇನ್ನೂ ಹೊರಟು ಹೋಗದಿರಲು ಬರಿಯ ನಾನೇ ಕಾರಣವಿರಲಿಕ್ಕಿಲ್ಲ. ಆರು ವರ್ಷಗಳ ನಂತರ ಅನಿರೀಕ್ಷಿತವಾಗಿ ನನ್ನ ಬಳಿಗೇ ಟ್ರೈನಿಂಗ್‌ಗೆ ಎಂದು ಬಂದಿದ್ದ ರಜನಿಯ ತಮ್ಮ ಕಿರಣ ಹೇಳಿದ ಸಂಗತಿಗಳು ಅವಳನ್ನು ಇಂದಿಗೂ ನನ್ನೊಳಗೆ ಜೀವಂತವಾಗಿರಿಸಿದ ಮೂಲ ದ್ರವ್ಯ ಇರಬಹುದೆ? ಅಡಿಗರ ಕವನ ನೆನಪಾಗುತ್ತದೆ... 

ಮುಗಿಲಲಿ ಮೂಡಿದ 
ಒಲವಿನ ಕನಸು 
ಮನಸಿಗಿಳಿಯದಲ್ಲ 
ಇಳಿದರು 
ನನಸನಾಳದಲ್ಲ... 

ಹಣದ ಹಿಂದೆ ಹೂಡಿದ ಓಟದಲ್ಲಿ ನಾನೂ ಸೇರಿಕೊಂಡಿದ್ದು ತುಂಬ ತಡವಾಗಿ. ಒಮ್ಮೆ ಓಡತೊಡಗಿದ್ದೇ ಎಲ್ಲ ಮರೆಯತೊಡಗಿದೆ ಅಥವಾ ನನ್ನ ಪ್ರಯತ್ನವಿಲ್ಲದೆಯೇ ಎಲ್ಲ ಮರೆತು ಹೋಯಿತೋ... ಮೊದಲ ಮೂರೋ ನಾಲ್ಕೋ ವರ್ಷಗಳ ಕಾಲ ನಾನೆಷ್ಟು ಪ್ರಾಮಾಣಿಕ, ದಕ್ಷ ಇತ್ಯಾದಿಗಳೆಲ್ಲ ಆಗಿದ್ದೆ! ನಂತರ ಸುರುವಾಯಿತು ಹಣ ಮಾಡುವ ಚಾಲಾಕಿ ಅಥವಾ ಹಠ? 

ಹೌದು, ಹಠವೇ. 

ನನ್ನ ಸೋಲಿಗೆ ಕಾರಣವಾಗಿದ್ದೇ ಹಣದ ಬಗ್ಗೆ ನನಗಿದ್ದ ತಿರಸ್ಕಾರ. ಅಲ್ಪ ತೃಪ್ತಿ. ಇಲ್ಲಿ ಪ್ರೀತಿ ಕೂಡ ದುಡ್ದು ಕೊಟ್ಟು ಕೊಂಡುಕೊಳ್ಳಬೇಕಾದ ಸಂಗತಿ. ಇಲ್ಲದಿದ್ದರೆ ಮದುವೆಯಾಗಿ ಏಳು ವರ್ಷ ಕಾಲ ಜೊತೆಯಾಗಿ ಸಂಸಾರ ನಡೆಸಿದ್ದ ಅಕ್ಕನಿಗೆ ಭಾವ ವ್ಯವಹಾರದಲ್ಲಿ ಸೋತು ಸಾಲದಲ್ಲಿ ಮುಳುಗತೊಡಗಿದ ಕೂಡಲೇ ಕೀಳು ಜಾತಿಯವನು ಅನಿಸತೊಡಗಿತೇಕೆ? ಅದೇ ಒಂದು ಜಗಳವಾಗಿ ಭಾವ ಅನಿಸಿಕೊಂಡವನು ಆತ್ಮಹತ್ಯೆ ಮಾಡಿಕೊಂಡನಲ್ಲ. ಪ್ರೇಮ ವಿವಾಹದ ತೀವ್ರತೆ, ಪ್ರೀತಿ ಪ್ರೇಮಗಳೆಂಬ ಭ್ರಮೆ ಕೂಡಾ ಹಣದ್ದು. ಹಣವಿಲ್ಲದಿದ್ದರೆ ಹೆತ್ತ ತಾಯಿಗೂ ಮಗನೆಂದರೆ ತಿರಸ್ಕಾರ ಹುಟ್ಟುತ್ತದೆ. ಹಣವುಳ್ಳವನ ಹಾದಿ ಆದರ್ಶವಾಗುತ್ತದೆ. ತಲೆ ಒಡೆದು ಕೊಲೆ ಮಾಡಿಯೂ ನನ್ನ ಮನಸ್ಸು ನನ್ನನ್ನು ಪ್ರಶ್ನಿಸದೇ ಸುಖವಾಗಿರಲು ಒಗ್ಗಿಕೊಳ್ಳಬಲ್ಲುದಾದರೆ ಅದೇ ಮೌಲ್ಯ, ಧರ್ಮ. ನಾನೀಗ ಒಗ್ಗಿಕೊಂಡಿಲ್ಲವೆ? 

ನಾನು ಸುಖವಾಗಿದ್ದೇನೆಯೆ? ದ್ವಂದ್ವಗಳನ್ನು ಮೀರಿ ನಿಂತಿದ್ದೇನೆಯೆ? ಅಥವಾ ಕೇವಲ ಪ್ರಜ್ಞೆಯಿಂದ ದೂರವೇ ಉಳಿಯುವುದರಲ್ಲಿ, ಸಿಗರೇಟು ಮದ್ಯಗಳಲ್ಲಿ ನನ್ನನ್ನೇ ಕಳೆದುಕೊಳ್ಳುತ್ತ ಸುಖವನ್ನು ಭ್ರಮಿಸುತ್ತಿದ್ದೇನೆಯೆ? ಚಿಕ್ಕಪ್ಪನ ಮಗ ಹೇಳುತ್ತಿದ್ದನಲ್ಲ, ತಾನು ದುಡಿದದ್ದನ್ನು ತಾನು ತಿನ್ನುವುದಕ್ಕೂ ಯೋಗ ಬೇಕು ಅಂತ? ನನ್ನ ಭ್ರಷ್ಟತೆಯ ಬಗ್ಗೆ ಇವತ್ತು ಯಾರೂ ಆಡುವುದಿಲ್ಲ. ಎಲ್ಲರೂ ನನ್ನನ್ನು ಸ್ವೀಕರಿಸಿದ್ದಾರೆ. ನನ್ನ ಹೆಂಡತಿ ಮಕ್ಕಳನ್ನೂ ಸ್ವೀಕರಿಸಿದ್ದಾರೆ. ಪ್ರತಿಷ್ಠೆಯ ಪಟ್ಟ ಕೊಟ್ಟಿದ್ದಾರೆ. ಆದರೆ ನಾನು ಹುಡುಕುತ್ತಿರುವುದೇನನ್ನು? 

ಒಂದು ರಾತ್ರಿ ಹೀಗೆ, ಹಾಸಿಗೆಯ ಮೇಲೆ, ನಿದ್ದೆ ಬರದೇ ಕತ್ತಲಲ್ಲೇ ಎದ್ದು ಕುಳಿತ ಕಾಲಕ್ಕೆ ಅವನು, ಅದೇ ಅವನು ಪ್ರತ್ಯಕ್ಷನಾಗಿ ಮುಗ್ಧ ನಗೆ ನಕ್ಕಂತಾಯಿತು. ಯಾಕೋ ಎಣಿಸುತ್ತ ಹೋದಂತೆಲ್ಲ ಅಳು ಬರತೊಡಗಿತು. ಎಂಟು ವರ್ಷಗಳ ನಂತರ ನಾನು ಮೊದಲ ಬಾರಿಗೆ ಅಳತೊಡಗಿದೆ. ಶಬ್ದ ಮಾಡುವುದಕ್ಕೂ ಹೆದರಿ, ಉಸಿರು ಕಟ್ಟಿಕೊಂಡು, ಪಕ್ಕದಲ್ಲೆ ಮಲಗಿದ್ದ ಹೆಂಡತಿಯೇನಾದರೂ ಎದ್ದರೆ ಅವಳು ನಂಬಿದ್ದ ನನ್ನ ವ್ಯಕ್ತಿತ್ವವೇ ಸುಳ್ಳಾಗಿಬಿಡುತ್ತಿತ್ತು. ಅವಳಿಗೆ ಅಂಥ ಆಘಾತ ನೀಡಬಲ್ಲ ಧೈರ್ಯವೇ ನನ್ನಲ್ಲಿರಲಿಲ್ಲ. ದುಃಖ ತಾಳಲಾಗಲಿಲ್ಲ. ಕಾರಣವೇ ಗೊತ್ತಿರಲಿಲ್ಲ. ಅಳು ಒತ್ತರಿಸಿಕೊಂಡು ಬಂದಾಗ ಮೈಮನ ಸಹಕರಿಸದೆ ಹಿಂಸೆಯಾಗಿ ನರಕವನ್ನು ಅನುಭವಿಸಿ ಗೊತ್ತಿತ್ತು. ಧಾರಾಕಾರ ಅಳು ಬಂದರೂ ಯಾಕೆಂದೇ ತಿಳಿಯದ ವಿಚಿತ್ರ ಸ್ಥಿತಿ ಅದೇ ಮೊದಲಾಗಿತ್ತು. ಕೋಣೆಯಿಂದ ಹೊರಬಂದು ಬಾತ್‌ರೂಂಗೆ ಹೋಗಿ ಅಳತೊಡಗಿದೆ. ಎದುರಿನ ಕನ್ನಡಿಯಲ್ಲಿ ನನ್ನ ವಿಕಾರ ಮುಖ ಕಾಣುತ್ತಿತ್ತು. ಅಮ್ಮಾ ಅಮ್ಮಾ ಎಂದು ಧ್ವನಿಯಿಲ್ಲದೆ ಬರೀ ಬಾಯಾಡಿಸಿ ಅಳುತ್ತಿದ್ದೆ. ಎಷ್ಟೋ ಹೊತ್ತಿನ ಮೇಲೆ ಕನ್ನಡಿಯನ್ನೇ ನೋಡಿ ಅಳತೊಡಗಿದೆ. ಅಳುತ್ತಲೇ............ 

ನಂಬುತ್ತೀರೋ ಇಲ್ಲವೋ. 

ನಗು ಬಂತು. ಪುನಃ ನಗುವುದಕ್ಕಾಗಿ ಅಳು ಬರಿಸಿಕೊಂಡೆ. 

(ದಿನಾಂಕ 25/01/1998ರ ಉದಯವಾಣಿ ಸಾಪ್ತಾಹಿಕದಲ್ಲಿ ಪ್ರಕಟವಾದ ನನ್ನ ಮೊದಲ ಸಣ್ಣಕತೆ. ಚಿತ್ರ ಜೇಮ್ಸ್ ವಾಜ್)
ಮುಂದೆ ಓದಲು ಇಲ್ಲಿ ಕ್ಲಿಕ್ ಮಾಡಿ...